ಮಂಗಳೂರು: ಝೀ ಕನ್ನಡ ವಾಹಿನಿಯ ‘ಸರಿಗಮಪ ಲಿಟಲ್ ಚಾಂಪ್ಸ್-2026’ ಸಂಗೀತ ರಿಯಾಲಿಟಿ ಶೋನಲ್ಲಿ ಮಂಗಳೂರಿನ ಬಾಲ ಪ್ರತಿಭೆ ಅಶ್ಮಿತ್ ಎ.ಜೆ. ಪ್ರಥಮ ಸ್ಥಾನ ಪಡೆದು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂಡಂಬೈಲ್ನ ರೇವತಿ-ಜಯರಾಮ್ ದಂಪತಿಯ ಪುತ್ರ ಅಶ್ಮಿತ್, ಕಾರ್ಯಕ್ರಮದ ಪ್ರತಿ ವಾರವೂ ಉತ್ತಮ ಗಾಯನದ ಮೂಲಕ ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದರು.
ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಪ್ರಶಂಸೆ ಪಡೆದಿದ್ದ ಅವರು ‘ಸ್ವರ ಪುತ್ರ’ ಎಂಬ ಬಿರುದನ್ನೂ ಪಡೆದಿದ್ದರು. ಚಿಕ್ಕ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಅಶ್ಮಿತ್, 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.ಸಂಧ್ಯಾ ಸತ್ಯನಾರಾಯಣ ಭಟ್ ಅವರಿಂದ ಸಂಗೀತಾಭ್ಯಾಸ ಪಡೆಯುತ್ತಿರುವ ಅವರು, ವಿದ್ವಾನ್ ವೇಣುಗೋಪಾಲ್ ಶಾನ್ಭೋಗ್ ಅವರಿಂದ ವಯಲಿನ್ ತರಬೇತಿಯನ್ನೂ ಪಡೆಯುತ್ತಿದ್ದಾರೆ.ಸರಿಗಮಪ ಲಿಟಲ್ ಚಾಂಪ್ಸ್-2026ರ ವಿಜೇತರಾಗಿ ಹೊರಹೊಮ್ಮುವ ಮೂಲಕ ಅಶ್ಮಿತ್ ಮಂಗಳೂರು ಹಾಗೂ ಕರಾವಳಿಯ ಕೀರ್ತಿಗೆ ಮತ್ತೊಂದು ಗರಿಮೆ ತಂದಿದ್ದಾರೆ.













































