ಸುಲ್ತಾನ್ ಪುರ (ಉತ್ತರ ಪ್ರದೇಶ): ರಕ್ಷಾ ಬಂಧನ ಅಣ್ಣ-ತಂಗಿಯರ ಬಾಂಧವ್ಯದ ಹಬ್ಬವಾಗಿದೆ. ಸಹೋದರನ ರಕ್ಷಣೆಗಾಗಿ ಪ್ರಾರ್ಥಿಸಿ ರಾಖಿ ಕಟ್ಟುವ ಸಹೋದರಿಯರು ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಮನೆಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಇಂದು(ಆ 28) ಉತ್ತರ ಪ್ರದೇಶದ ಸುಲ್ತಾನ್ ಪುರದ ಜಿಲ್ಲಾ ಕಾರಾಗೃಹದಲ್ಲೂ ರಕ್ಷಾ ಬಂಧನದ ಸಂಭ್ರಮ ಮನೆ ಮಾಡಿತ್ತು.
ಹೌದು, ಜೈಲಿನಲ್ಲಿ ಕೈದಿಗಳ ಭೇಟಿಗೆ ಬಂದಿದ್ದ ಮಹಿಳೆಯರ ಉದ್ದದ ಸರತಿ ಸಾಲು ಕಂಡುಬಂದಿತ್ತು. ಭಾರಿ ಭದ್ರತಾ ಪರಿಶೀಲನೆ ನಡುವೆ 478 ಮಹಿಳೆಯರು ಮತ್ತು 103 ಮಕ್ಕಳು ಜೈಲಿಗೆ ಆಗಮಿಸಿದ್ದರು. ಜೈಲಿನಲ್ಲಿರುವ ತಮ್ಮ ಪ್ರೀತಿಪಾತ್ರರಿಗೆ ರಾಖಿ ಕಟ್ಟುವ ಮೂಲಕ ಹಬ್ಬ ಆಚರಿಸಿದರು. 307 ಕೈದಿಗಳಿಗೆ ರಾಖಿ ಕಟ್ಟಿ ಸಿಹಿ ಹಂಚಲಾಗಿದೆ ಎಂದು ಜೈಲಿನ ಸೂಪರಿಂಟೆಂಡೆಂಟ್ ಪ್ರಂಜಲ್ ಅರವಿಂದ್ ಹೇಳಿದ್ದಾರೆ.ದೂರದ ಊರುಗಳಿಂದ ಬಂದಿದ್ದ ಮಹಿಳೆಯರು, ಸರತಿ ಸಾಲಿನಲ್ಲಿ ನಿಂತು ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದಾರೆ.’ನನ್ನ ಸಹೋದರನಿಗಾಗಿ ರಾಖಿ ಮತ್ತು ಸಿಹಿ ತಿನಿಸುಗಳನ್ನು ತಂದಿದ್ದೆ. ಅವರು ಬೇಗ ಬಿಡುಗಡೆ ಆಗಲೆಂದು ಪ್ರಾರ್ಥಿಸಿದೆ’ ಎಂದು ನೀತು ಎಂಬ ಮಹಿಳೆಯೊಬ್ಬರು ತಿಳಿಸಿದ್ದಾರೆ.
“ನನ್ನ ಸಹೋದರನನ್ನು ಜೈಲಿನಲ್ಲಿ ನೋಡುವುದು ಅತ್ಯಂತ ನೋವಿನ ವಿಷಯ. ಅಣ್ಣ ಬೇಗ ಬಿಡುಗಡೆ ಆಗುವ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದು ದೋಸ್ತ್ಪುರದಿಂದ ಆಗಮಿಸಿದ್ದ ರೂಪಾ ಹೇಳಿದ್ದಾರೆ.ನನ್ನ ಅಣ್ಣನಿಗೆ ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಮತ್ತೊಬ್ಬ ಮಹಿಳೆ ಹೇಳಿದ್ದಾರೆ.ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕೈದಿಗಳಿಗೆ ರಾಖಿ ಕಟ್ಟಲು ಅವರ ಕುಟುಂಬ ಸದಸ್ಯರಿಗೆ ಅವಕಾಶ ನೀಡಲಾಗಿತ್ತು ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ.















































