ಬೆಂಗಳೂರು: ನಗರದ ಯಾಡಿಸನ್ ಬ್ಲ್ಯೂ ಹೋಟೆಲ್ನಲ್ಲಿಸೋಮವಾರ (ಮಾರ್ಚ್ 10) ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಅಧಿಕಾರಿಗಳ ವರ್ಗಾವಣೆ ವಿಚಾರ ಪ್ರಸ್ತಾಪವಾಗಿ ಶಾಸಕರು ಮತ್ತು ಸಚಿವರ ನಡುವೆ ಮಾತಿನ ಚಕಮಕಿ ನಡೆದಿದೆ.
‘ಶಾಸಕರ ಅಭಿಪ್ರಾಯ ಕೇಳಿ ಅಧಿಕಾರಿಗಳ ವರ್ಗಾವಣೆ ಮಾಡಿದರೆ ಮಾತ್ರ ಆಡಳಿತದಲ್ಲಿ ಹಿಡಿತ ಸಾಧಿಸಲು ಸಾಧ್ಯ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರ ಮಾತಿಗೆ ಬೆಲೆ ಕೊಡುವುದಿಲ್ಲ. ತಮಗೆ ಬೇಕಾದವರನ್ನು ವರ್ಗಾವಣೆ ಮಾಡಿಸಿಕೊಂಡರೆ ಹೇಗೆ’ ಎಂದು ಕಂಪ್ಲಿ ಶಾಸಕ ಕಂಪ್ಲಿ ಗಣೇಶ್ ಪ್ರಶ್ನಿಸಿದ್ದಾರೆ.ಆಗ ಮಧ್ಯಪ್ರವೇಶಿಸಿದ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಒಟ್ಟಾಗಿ ಬಂದರೆ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ಆಗುವುದಿಲ್ಲ. ಆದರೆ, ಆ ರೀತಿ ಆಗುತ್ತಿಲ್ಲ.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಲ್ಲಿನ ಶಾಸಕರು ಒಂದಾಗಿ ಬರುತ್ತಾರೆಯೇ’ ಎಂದರು.ಆಗ ರಾಯಚೂರು ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಎನ್.ಎಸ್. ಬೋಸರಾಜು, ‘ನಾನು ರಾಯಚೂರು ಜಿಲ್ಲೆಯವನು. ವರ್ಗಾವಣೆ ವಿಚಾರಕ್ಕೆ ನೀವು ಯಾಕೆ ಪತ್ರ ನೀಡುತ್ತೀರಾ’ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ ಅವರನ್ನು ಪ್ರಶ್ನಿಸಿದರು. ಅದಕ್ಕೆ ಶರಣಪ್ರಕಾಶ್ ಪಾಟೀಲ, ‘ನಾನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ. ಸ್ಥಳೀಯ ಶಾಸಕರು ಕೇಳಿದ ಕಾರಣಕ್ಕೆ ಪತ್ರ ನೀಡಿದ್ದೇನೆ. ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವುದು ನನ್ನ ಕೆಲಸ’ ಎಂದು ಪ್ರತಿಕ್ರಿಯಿಸಿದ್ದಾರೆ.
ವರ್ಗಾವಣೆಗೆ ಸಂಬಂಧಿಸಿದಂತೆ, ಶಾಸಕ ಬಸನಗೌಡ ದದ್ದಲ್ ಅವರಿಗೆ ಶರಣಪ್ರಕಾಶ್ ಪಾಟೀಲ ಪತ್ರ ಕೊಟ್ಟಿದ್ದರು. ಇದು ಬೋಸರಾಜು ಅವರನ್ನು ಕೆರಳಿಸಿತ್ತು. ‘ನನ್ನನ್ನು ಕೇಳದೆ ಹೇಗೆ ಪತ್ರ ಕೊಟ್ಟಿದ್ದೀರಿ’ ಎಂದು ಬೋಸರಾಜು ಮರು ಪ್ರಶ್ನಿಸಿದ್ದು, ಇಬ್ಬರು ಸಚಿವರ ನಡುವೆ ಜಟಾಪಟಿಗೆ ಕಾರಣವಾಯಿತು ಎಂದು ಗೊತ್ತಾಗಿದೆ.













































