ಪುತ್ತೂರು: ಪುರುಷರಕಟ್ಟೆಯಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ, ಯುವಕರು ನೀಡಿದ ಪ್ರತಿ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದ್ದ ಯುವತಿ ಸೇರಿದಂತೆ ಒಟ್ಟು ಆರು ಮಂದಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಘಟನೆಯ ಹಿನ್ನೆಲೆ:ಮೊದಲು ಯುವತಿಯೊಬ್ಬಳು “ಯುವಕನೊಬ್ಬ ಚಾಕು ಹಿಡಿದು ತಂಡದೊಂದಿಗೆ ವಾಹನದಲ್ಲಿ ಬಂದು ತನ್ನನ್ನು ಹಿಂಬಾಲಿಸಿ, ದಾಳಿ ಮಾಡಲು ಯತ್ನಿಸಿದ್ದಾನೆ” ಎಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕರ ತಂಡವು ಮತ್ತೊಂದು ಪ್ರತಿ ದೂರು ದಾಖಲಿಸಿತ್ತು.
“ನೈಜ ಸಂಗತಿಗಳು ಗೊತ್ತಿದ್ದರೂ ಸಹ ಧಾರ್ಮಿಕ ದ್ವೇಷದ ಹಿನ್ನೆಲೆಯಲ್ಲಿ, ಹಿಂದೂ ಸಂಘಟನೆಯ ಮುಖಂಡ ಮುರಳಿಕೃಷ್ಣ ಹಸಂತಡ್ಕ ಮತ್ತು ಇತರರು ಸೇರಿ ಯುವತಿಯ ಮೂಲಕ ನಮ್ಮ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ” ಎಂದು ಯುವಕರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಆರೋಪಿಗಳು ಮತ್ತು ನ್ಯಾಯಾಲಯದ ಆದೇಶ:ಯುವಕರು ನೀಡಿದ ದೂರಿನನ್ವಯ ಪೊಲೀಸರು ವೀಕ್ಷಾ ವಿ.ಎಸ್., ಆಕೆಯ ತಂದೆ ಸಾಂತಪ್ಪ ಗೌಡ, ಮುಖಂಡ ಮುರಳಿಕೃಷ್ಣ ಹಸಂತಡ್ಕ, ಸಂಬಂಧಿಕ ಪುರುಷೋತ್ತಮ ಗೌಡ ಮುಂಗ್ಲಿಮನೆ, ಜಯರಾಮ ಡಿ. ಮತ್ತು ಆನಂದ ಗೌಡ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯವು ಎಲ್ಲಾ ಆರು ಮಂದಿ ಆರೋಪಿಗಳಿಗೆ ಜಾಮೀನು ನೀಡಿ ಆದೇಶಿಸಿದೆ. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಮಾಧವ ಪೂಜಾರಿ ಮತ್ತು ರಾಕೇಶ್ ಬಲ್ನಾಡು ವಾದ ಮಂಡಿಸಿದ್ದರು.


















































