ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮತ್ತೊಂದು ಸುತ್ತಿನ ಮಾತಿನ ಸಮರ ಆರಂಭವಾಗಿದೆ. ಕಾಂಗ್ರೆಸ್ಸಿನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅರ್ಧನಾರೀಶ್ವರ ಹೇಳಿಕೆಗೆ, ಬಿಜೆಪಿಯ ನಾಯಕರು ಒಬ್ಬರಂತೆ ಒಬ್ಬರು ವಾಕ್ ಪ್ರಹಾರ ನಡೆಸುತ್ತಿದ್ದಾರೆ. ಒಂದು ಸಮುದಾಯಕ್ಕೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ, ಅದು ಕಾಂಗ್ರೆಸ್ಸಿನ ಡಿಎನ್ಎ ನಲ್ಲೇ ಇದೆ ಎಂದು ಬಿಜೆಪಿ ಆರೋಪಿಸಿದೆ
ಬೆಂಗಳೂರು, ಜು.9 : ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರನಡುವೆ ಮತ್ತೊಂದು ಸುತ್ತಿನ ಮಾತಿನ ಸಮರ ಆರಂಭವಾಗಿದೆ. ಕಾಂಗ್ರೆಸ್ಸಿನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅರ್ಧನಾರೀಶ್ವರ ಹೇಳಿಕೆಗೆ, ಬಿಜೆಪಿಯ ನಾಯಕರು ಒಬ್ಬರಂತೆ ಒಬ್ಬರು ವಾಕ್ ಪ್ರಹಾರ ನಡೆಸುತ್ತಿದ್ದಾರೆ. ಒಂದು ಸಮುದಾಯಕ್ಕೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ, ಅದು ಕಾಂಗ್ರೆಸ್ಸಿನ ಡಿಎನ್ಎ ನಲ್ಲೇ ಇದೆ ಎಂದು ಬಿಜೆಪಿ ಆರೋಪಿಸಿದೆ”ಬಿಜೆಪಿಯವರಿಗೆ ಎರಡು ವರ್ಷವಾದರೂ, ರಾಷ್ಟ್ರೀಯ ಅಧ್ಯಕ್ಷರ ನೇಮಕವನ್ನು ಮಾಡಿಕೊಳ್ಳಲು ಇನ್ನೂ ಆಗಿಲ್ಲ. ಬಿವೈ ವಿಜಯೇಂದ್ರ ಮತ್ತು ಆರ್.ಅಶೋಕ್, ಮೊದಲು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲಿ. ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಈಗ ಮಹಿಳೆಯರನ್ನು ಹುಡುಕುತ್ತಿದ್ದಾರೆ. ಮಹಿಳೆಯರ ಬದಲಾಗಿ ಅರ್ಧನಾರೀಶ್ವರರನ್ನು ನೇಮಿಸಿದರೆ ಬಹಳ ಸಂತೋಷ” ಎಂದು ಬಿಕೆ ಹರಿಪ್ರಸಾದ್ ಹೇಳಿದ್ದರು.ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬಿ.ಕೆ ಹರಿಪ್ರಸಾದ್ ಅವರೇ, ನಮ್ಮ ಸ್ಥಾನ-ಮಾನಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದು ಬೇಡ. ಭಾರತೀಯ ಜನತಾ ಪಾರ್ಟಿಯಲ್ಲಿ ‘ಕಾರ್ಯಕರ್ತ’ ಎಂಬುದೇ ಬಹುದೊಡ್ಡ ಹುದ್ದೆ ಅದಕ್ಕಿಂತ ದೊಡ್ಡ ಸ್ಥಾನಮಾನ ಮತ್ತೊಂದು ಇಲ್ಲ ಎಂದು ಭಾವಿಸುವುದೇ ನಮ್ಮ ಪಕ್ಷ ನಮಗೆ ಕಲಿಸಿಕೊಟ್ಟಿರುವ ಶಿಸ್ತು ಹಾಗೂ ಸಂಸ್ಕಾರ, ಈ ಕಾರಣಕ್ಕಾಗಿಯೇ ನಮಗೆ ದೊರೆಯುವ ಪ್ರತಿಯೊಂದು ಅವಕಾಶಗಳನ್ನು ಜವಾಬ್ದಾರಿ ಎಂದು ಪರಿಗಣಿಸಿ ನಮ್ಮನ್ನು ಆ ನಿಟ್ಟಿನಲ್ಲಿ ಸಮರ್ಪಿಸಿಕೊಳ್ಳುತ್ತೇವೆ.
ಪ್ರಧಾನ ಮಂತ್ರಿ ಸ್ಥಾನವನ್ನು ಪ್ರಧಾನ ಸೇವಕ ಎಂದು ಪರಿಗಣಿಸಿ ತಮ್ಮನ್ನು ದೇಶಕ್ಕಾಗಿ ಸಮರ್ಪಿಸಿಕೊಂಡವರು ಹೆಮ್ಮೆಯ ಪ್ರಧಾನಿ ಮೋದಿಜಿ ಅವರು. ಇದು ನಮ್ಮ ಭಾರತೀಯ ಜನತಾ ಪಾರ್ಟಿಯ ಪರಮ ಧೈಯ.
ದಯವಿಲ್ಲದ ಧರ್ಮವಾವುದಯ್ಯಾ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ. ಎಂಬ ಬಸವಣ್ಣನವರ ತತ್ವವನ್ನು ಆಧರಿಸಿ ಸಕಲ ಜೀವರಾಶಿಗಳಿಗೆಲ್ಲ ನೆರಳು ನೀಡುವ ಸಂಕಲ್ಪ ಹೊತ್ತ ‘ಬೃಹತ್ ರಾಜಕೀಯ ವೃಕ್ಷ ‘ನಮ್ಮ ಭಾರತೀಯ ಜನತಾ ಪಾರ್ಟಿ.’ಮಂಜಮ್ಮ ಜೋಗತಿ’ ಅವರನ್ನು ಗುರುತಿಸಿ ಕರ್ನಾಟಕದ ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿನಿಧಿಸುವ ಜಾನಪದ ಅಕಾಡೆಮಿಯ ಅಧ್ಯಕ್ಷರನ್ನಾಗಿಸಿ ‘ಪದ್ಮ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಿ ಲಿಂಗತಾರತಮ್ಯವನ್ನು ಮೆಟ್ಟಿನಿಂತು ಒಟ್ಟು ಸಮಾಜದ ಕಲ್ಪನೆಯ ದೇಶ ಕಟ್ಟುವ ಸಂಕಲ್ಪ ಸಾಕ್ಷೀಕರಿಸಿದ ಪಕ್ಷ ನಮ್ಮದು. ಅರ್ಹತೆ ಇರುವ ಪ್ರತಿಯೊಬ್ಬರನ್ನು ಗುರುತಿಸಿ, ಗೌರವಿಸಿ ಜವಾಬ್ದಾರಿ ಸ್ಥಾನಗಳನ್ನು ನೀಡುವ ಆದರ್ಶ ನಾವು ಅಳವಡಿಸಿಕೊಂಡಿದ್ದೇವೆ.ನೀವು ವ್ಯಂಗ್ಯವಾಡಿ ಅಪಮಾನಿಸಿದ ನಾರಿಯರು, ಅರ್ಧ ನಾರಿಯರು ಭವಿಷ್ಯತ್ತಿನಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುವ ಅವಕಾಶಗಳು ಇರುವುದು ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ. ನಿಮ್ಮ ನಾಲಿಗೆಯಿಂದ ಹೊರ ಬಿದ್ದಿರುವ ಮಾತುಗಳು ಮಹಿಳೆಯರು ಹಾಗೂ ಮಂಗಳಮುಖಿಯರಿಗಷ್ಟೇ ಅಪಮಾನಿಸಿಲ್ಲ ಅದು ಭಾರತದ ಸಂಸ್ಕೃತಿಯನ್ನೂ ಅವಹೇಳನ ಮಾಡಿದಂತಾಗಿದೆ. ಈ ಕೂಡಲೇ ಸ್ತ್ರೀ ಸಮುದಾಯ ಹಾಗೂ ತೃತೀಯ ಲಿಂಗಿ ಸಮುದಾಯಗಳ ಕ್ಷಮೆಯಾಚಿಸಿ ಎಂದು ವಿಜಯೇಂದ್ರ ಟ್ವಿಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.














































