ವೇತನ ತಾರತಮ್ಯ ; ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಲು ಸಂಘದಿಂದ ಸಿದ್ಧತೆ
ಬೆಂಗಳೂರು: ಆರೋಗ್ಯ ಕವಚ 108 ಆ್ಯಂಬುಲೆನ್ಸ್ನೌಕರರ ವೇತನ ತಾರತಮ್ಯ ಬಗೆಹರಿಸುವುದರ ಜೊತೆಗೆ ಸಾರಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ನೌಕರರ ಸಂಘ ಆಗಸ್ಟ್ 1 ರಿಂದ ಸೇವೆ ಸ್ಥಗಿತಗೊಳಿಸಿ ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದೆ.ರಾಜ್ಯದಲ್ಲಿ ಆರೋಗ್ಯ ಇಲಾಖೆಯಡಿ 1700 ಆ್ಯಂಬು ಲೆನ್ಸ್ಗಳು ಕಾರ್ಯಾಚರಣೆ ನಡೆಸುತ್ತಿದ್ದು 108 ಆರೋಗ್ಯ ಕವಚ ಯೋಜನೆಯ 3,500 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿ ದ್ದಾರೆ ಎಂದುಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವ ಹೇಳಿದರು.ಇಲಾಖೆ ಆದೇಶದಂತೆ ಇದೀಗ ಜಿವಿಕೆ ಸಂಸ್ಥೆಯು ಆ್ಯಂಬುಲೆನ್ಸ್ ಸಿಬ್ಬಂದಿ ಕರ್ತವ್ಯವನ್ನು 3 ಪಾಳಿಗೆ (8 ಗಂಟೆ) ನಿಗದಿಪಡಿಸಿದೆ. ಇದರಿಂದಾಗಿ ಮುಂಜಾನೆ 6 ಕ್ಕೆ ಹಾಗೂ ರಾತ್ರಿ 10 ಗಂಟೆಯ ಬಳಿಕ ಸೇವೆಗೆ ಹಾಜರಾಗುವ ಸಿಬ್ಬಂದಿ ಅದರಲ್ಲೂ ಮಹಿಳಾ ಸಿಬ್ಬಂದಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥರ ಬಳಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಹಾಗಾಗಿ ಸೇವೆ ಸ್ಥಗಿತಗೊಳಿಸಲು ಮುಂದಾಗಿದ್ದೇವೆ ಎಂದರು.
ಈ ಹಿಂದೆ 2 ಪಾಳಿಯಲ್ಲಿ (12 ಗಂಟೆ) ಕಾರ್ಯನಿರ್ವಹಿಸುತ್ತಿದ್ದು ವೇತನ ಕನಿಷ್ಠ 32ರಿಂದ 35 ಸಾವಿರ ರೂ. ಇತ್ತು. ಇದೀಗ 3 ಪಾಳಿಯಲ್ಲಿ 8 ಗಂಟೆಗೆ ಕರ್ತವ್ಯ ನಿಗದಿಪಡಿಸಿದ್ದು ಕನಿಷ್ಠ 12 ಸಾವಿರ ಮಾತ್ರ ವೇತನ ಪಡೆಯುವಂತಾಗಿದೆ. ಇದರಿಂದಾಗಿ ಕುಟುಂಬವನ್ನು ನಿರ್ವಹಣೆ ಮಾಡುವುದು ದುಸ್ತರವಾಗುತ್ತಿದೆ. ಆದ್ದರಿಂದ ಸರ್ಕಾರ ಈ ಹಿಂದಿನಂತೆ 2 ಪಾಳಿ ಕರ್ತವ್ಯಕ್ಕೆ ಅವಕಾಶ ನೀಡಬೇಕು. 2 ತಿಂಗಳ ಬಾಕಿ ವೇತನ ನೀಡುವುದರ ಜೊತೆಗೆ ವೇತನ ತಾರತಮ್ಯ ಪರಿಹರಿಸಬೇಕುಎಂದು ಹೇಳಿದರು.











































