ಬಿಹಾರ ಚುನಾವಣೆ: ಸ್ವತಂತ್ರ ಸ್ಪರ್ಧೆ ಘೋಷಿಸಿದ ಉಚ್ಚಾಟಿತ ಆರ್‌ಜೆಡಿ ನಾಯಕ ತೇಜ್​ ಪ್ರತಾಪ್​ ಯಾದವ್

Picture of Savistara

Savistara

Bureau Report

ಆರ್​ಜೆಡಿ ಅಧ್ಯಕ್ಷ ಲಾಲು ಪ್ರಸಾದ್​ ಯಾದವ್​ ಅವರ ಹಿರಿಯ ಪುತ್ರ ತೇಜ್​ ಪ್ರತಾಪ್​ ಯಾದವ್​, ಮುಂದಿನ ಬಿಹಾರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ.

ಪಾಟ್ನಾ (ಬಿಹಾರ): ಪಕ್ಷದಿಂದ ಉಚ್ಚಾಟನೆಗೊಂಡಿರುವ ಆರ್​ಜೆಡಿ ನಾಯಕ ತೇಜ್​ ಪ್ರತಾಪ್​ ಯಾದವ್​ ಅವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಅಧ್ಯಕ್ಷ ಲಾಲು ಪ್ರಸಾದ್​ ಯಾದವ್​ ಅವರ ಹಿರಿಯ ಪುತ್ರ ತೇಜ್​ ಪ್ರತಾಪ್​ ಯಾದವ್​, ವೈಶಾಲಿ ಜಿಲ್ಲೆಯ ಮಹುವಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಶನಿವಾರ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಅವರು ಸಮಸ್ತಿಪುರ ಜಿಲ್ಲೆಯ ಹಸನ್​ಪುರ ಕ್ಷೇತ್ರದ ಶಾಸಕರಾಗಿದ್ದಾರೆ.ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ನಾನು ಮಹುವಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ. ಇದನ್ನು ನಾನು ಈ ಹಿಂದೆಯೂ ಹೇಳಿದ್ದೆ. ವಿರೋಧಿಗಳು ಈ ಬಗ್ಗೆ ಉರಿದುಕೊಳ್ಳಲು ಪ್ರಾರಂಭಿಸುತ್ತಾರೆ, ಉರಿದುಕೊಳ್ಳಲಿ, ನಾನು ಈ ಸವಾಲು ಸ್ವೀಕರಿಸಿದ್ದೇನೆ. ಅಲ್ಲದೆ, ನಾನು ಸಂಪೂರ್ಣ ಶಕ್ತಿ ಮತ್ತು ಹುರುಪಿನಿಂದ ಚುನಾವಣಾ ಕಣಕ್ಕೆ ಪ್ರವೇಶಿಸುತ್ತೇನೆ” ಎಂದು ತಿಳಿಸಿದ್ದಾರೆ.

ಆರು ವರ್ಷಗಳ ಕಾಲ ಆರ್​ಜೆಡಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಹಿನ್ನೆಲೆಯಲ್ಲಿ, ಹಾಗೂ ಯಾವುದೇ ನೋಂದಾಯಿತ ಪಕ್ಷವಿಲ್ಲದ ಕಾರಣ, ಆಪ್ತರ ಸಲಹೆಯಂತೆ ತೇಜ್​ ಪ್ರತಾಪ್​ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ತೇಜ್​ ಪ್ರತಾಪ್​, ತಮ್ಮ ಅಭಿಪ್ರಾಯಗಳನ್ನು ಹೇಳಲು, ಕಾರ್ಯಕ್ರಮಗಳ ಕುರಿತು ಪ್ರಚಾರ ಮಾಡಲು, ಜನರ ಸಮಸ್ಯೆಗಳನ್ನು ಆಲಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟೀಂ ತೇಜ್ ಪ್ರತಾಪ್​​ ಎಂಬ ಪೇಜ್​ ಆರಂಭಿಸಿದ್ದಾರೆ.”ಟೀಂ ತೇಜ್​ ಪ್ರತಾಪ್​ ಯಾದವ್​ ಜನರನ್ನು ತಲುಪಲು ಒಂದು ವೇದಿಕೆಯಾಗಿದೆ. ಈ ಬಾರಿ ಅಂಕಲ್​ ನಿತೀಶ್​ ಕುಮಾರ್​ ಯಾದವ್​ ಮುಖ್ಯಮಂತ್ರಿ ಆಗುವುದಿಲ್ಲ. ಯುವಕರು, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಮಾತನಾಡುವ ಯಾವುದೇ ಅಭ್ಯರ್ಥಿಯನ್ನು ನಾವು ಬೆಂಬಲಿಸುತ್ತೇವೆ. ಅಂತಹ ಅಭ್ಯರ್ಥಿಯ ಜೊತೆಗೆ ನಾನು ಪೂರ್ಣ ಶಕ್ತಿಯಿಂದ ನಿಲ್ಲುತ್ತೇನೆ” ಎಂದು ತೇಜ್​ ಪ್ರತಾಪ್ ಹೇಳಿದ್ದಾರೆ.

ನೈತಿಕ ಮೌಲ್ಯಗಳ ಕೊರತೆ ಹಿನ್ನೆಲೆಯಲ್ಲಿ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್​ ಯಾದವ್​ ಅವರು, ಇತ್ತೀಚೆಗೆ ತಮ್ಮ ಹಿರಿಯ ಪುತ್ರ ತೇಜ್​ ಪ್ರತಾಪ್​ ಯಾದವ್​ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.

ಫೇಸ್​ಬುಕ್​ನಲ್ಲಿ ಪೋಸ್ಟ್ : ಅನುಷ್ಕಾ ಯಾದವ್​ ಎಂಬ ಯುವತಿಯ ಜೊತೆ ತೇಜ್​ ಪ್ರತಾಪ್​ ಕಳೆದ 12 ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿತ್ತು. ಇಬ್ಬರ ಫೋಟೋಗಳು ಕೂಡ ವೈರಲ್​ ಆಗಿದ್ದವು. ಇದರ ಬೆನ್ನಲ್ಲೇ ತೇಜ್​ ಪ್ರತಾಪ್​ ಯಾದವ್​ ಅವರು “ನಾನು ಅನುಷ್ಕಾ ಯಾದವ್​ ಅವರ ಜೊತೆ ಕಳೆದ 12 ವರ್ಷಗಳಿಂದ ರಿಲೇಷನ್​ಶಿಪ್​ನಲ್ಲೇನೆ. ಇದನ್ನು ಮೊದಲೇ ಹೇಳಬೇಕು ಎಂದುಕೊಂಡಿದ್ದೆ. ಆದರೆ, ಕಾಲ ಕೂಡಿ ಬಂದಿರಲಿಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ” ಎಂದು ಬರೆದು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು.ತೇಜ್​ ಪ್ರತಾಪ್​ ಯಾದವ್​ ಅವರು, ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್​ ರೈ ಅವರ ಮೊಮ್ಮಗಳು ಐಶ್ವರ್ಯಾ ರೈ ಅವರನ್ನು ಮದುವೆಯಾಗಿದ್ದಾರೆ. ಆದರೆ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇಬ್ಬರ ವಿಚ್ಛೇದನ ಪ್ರಕರಣ ಪ್ರಸ್ತುತ ಪಾಟ್ನಾದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.

ತೇಜ್​ ಪ್ರತಾಪ್​ ಅವರು ತನ್ನ ಫೇಸ್​ಬುಕ್​ ಪೋಸ್ಟ್​ಗಳನ್ನು ತೆಗೆದುಹಾಕಿ, ತಮ್ಮ ಖಾತೆಯನ್ನು ಹ್ಯಾಕ್​ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರೂ, ಲಾಲು ಪ್ರಸಾದ್​ ಯಾದವ್​ ಅವರು, ಮಗನನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಆದಾಗ್ಯೂ, ತೇಜ್​ ಪ್ರತಾಪ್​ ಯಾದವ್​ ಅವರು ಮಾತ್ರ ತಮ್ಮ ತಂದೆ, ತಾಯಿ, ಕಿರಿಯ ಸಹೋದರ ಹಾಗೂ ವಿಧಾನಸಭಾ ಪ್ರತಿಪಕ್ಷ ನಾಯಕ ತೇಜಸ್ವಿ ಪ್ರಸಾದ್​ ಯಾದವ್​ ಮತ್ತು ಅವರ ಕುಟುಂಬದ ಯಾವುದೇ ಸದಸ್ಯರ ವಿರುದ್ಧ ಇಲ್ಲಿಯವರೆಗೆ ಏನನ್ನೂ ಮಾತನಾಡಿಲ್ಲ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!