KMF: ರಾಜ್ಯ ಕಾಂಗ್ರೆಸ್‌ ಸರಕಾರಕ್ಕೆ ಸದ್ಯ ಕೆಎಂಎಫ್ ಕಗ್ಗಂಟು?

Picture of Savistara

Savistara

Bureau Report

ಅಧ್ಯಕ್ಷ ಗಾದಿ ಮೇಲೆ ಡಿಕೆಶಿ ಸೋದರ ಡಿ.ಕೆ.ಸುರೇಶ್ ಕಣ್ಣು, ಸಿಎಂ ಆಪ್ತ ರಾಘವೇಂದ್ರ ಹಿಟ್ನಾಳ್ ಕೂಡ ಪ್ರಯತ್ನ, ಬಲಾಬಲ ಪ್ರದರ್ಶನಕ್ಕೆ ವೇದಿಕೆ

ಬೆಂಗಳೂರು: ಹಾಲು ಉತ್ಪಾದಕರ ಸಹಕಾರ ರಂಗದಲ್ಲೇಮೇರುಸಂಸ್ಥೆಯಾಗಿರುವ “ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್)’ದ ಅಧ್ಯಕ್ಷ ಚುನಾವಣೆಯತ್ತ ಎಲ್ಲರ ದೃಷ್ಟಿ ನೆಟ್ಟಿದ್ದು, ಆಡಳಿತಾರೂಢ ಕಾಂಗ್ರೆಸ್‌ನೊಳಗೆ ಮತ್ತೊಂದು ಬಲಾಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗುವಂತಿದೆ.ಕೆಎಂಎಫ್ ಅಧ್ಯಕ್ಷ ಸ್ಥಾನದಿಂದ ಭೀಮಾ ನಾಯ್ಕ ನಿರ್ಗಮಿಸುತ್ತಿದ್ದಂತೆ ಸಹಕಾರ ಇಲಾಖೆಯು ಆಡಳಿತಾಧಿಕಾರಿಯನ್ನು ನೇಮಿಸಿದ್ದು, ಕೆಎಂಎಫ್‌ನಂತಹ ಸಂಸ್ಥೆಗೆ ಸುದೀರ್ಘ ಅವಧಿಗೆ ಆಡಳಿತಾಧಿಕಾರಿಯನ್ನು ಮುಂದುವರಿಸಬಾರದು ಎನ್ನುವ ಕೂಗು ಕೇಳಿಬಂದಿದೆ. ಹೀಗಾಗಿ ಆದಷ್ಟು ಬೇಗ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಒತ್ತಡ ಹೆಚ್ಚಾಗಿದೆ. ಎಲ್ಲರ ಚಿತ್ತ ಕೆಎಂಎಫ್ ಅಧ್ಯಕ್ಷ ಸ್ಥಾನದತ್ತ ನೆಟ್ಟಿದ್ದು, ಕೈ ಪಾಳಯದಲ್ಲಿ ಇದು ಹೊಸ “ರಾಜಕೀಯ ಕ್ರಾಂತಿ ಸೃಷ್ಟಿಗೆ ಕಾರಣವಾಗಲಿದೆ.

ಇಷ್ಟು ದಿನ ಹಾಲು ಒಕ್ಕೂಟಗಳ ಅಧ್ಯಕ್ಷ ಆಯ್ಕೆ ಕಾಂಗ್ರೆಸ್‌ಗೆ ತಲೆನೋವಾಗಿತ್ತು. ಬಹುತೇಕ ಒಕ್ಕೂಟಗಳಿಗೆ ಅವಿರೋಧವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ಫಲಪ್ರದವಾಗಿದ್ದು ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಒಕ್ಕೂಟದ ಅಧ್ಯಕ್ಷರ ಆಯ್ಕೆ ಬಾಕಿ ಇತ್ತು. ರಾಘವೇಂದ್ರ ಹಿಟ್ನಾಳ್ ಅವಿರೋಧ ಆಯ್ಕೆ ಮೂಲಕ ಅದೂ ಬಗೆಹರಿದಿದ್ದು, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರ ಆಯ್ಕೆ ಬಾಕಿ ಇದೆ. ಬಹುತೇಕ ಎಲ್ಲ ಒಕ್ಕೂಟಗಳ ಅಧ್ಯಕ್ಷರಿಂದ ಕೆಎಂಎಫ್ ಅಧ್ಯಕ್ಷರ ಆಯ್ಕೆಯ ಪಟ್ಟು ಬಿಗಿಯಾಗುತ್ತಿದ್ದು, ಆಡಳಿತಾಧಿಕಾರಿಯ ಅಧಿಕಾರ ಹೆಚ್ಚು ಕಾಲ ನಡೆಸಲು ಬಿಡಬಾರದು ಎಂದು ಸಹಕಾರ ಇಲಾಖೆ ಮೇಲೆ ಒತ್ತಡ ಹಾಕಲಾರಂಭಿಸಿದ್ದಾರೆ.ಹೀಗಾಗಿ ಚಿಕ್ಕಬಳ್ಳಾಪುರ ಒಕ್ಕೂಟದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ, ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ತಯಾರಿ ಮಾಡಿಕೊಳ್ಳಲೇಬೇಕಾಗಿದೆ.

ಸಿಎಂ – ಡಿಸಿಎಂ ಬಣದಿಂದ ಲಾಬಿ?

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಡಿ.ಕೆ.ಸುರೇಶ್ ಅವರನ್ನು ಬಮುಲ್ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಅಧಿಕೃತವಾಗಿ ಹಾಲು ಉತ್ಪಾದಕರ ಸಹಕಾರ ರಂಗಕ್ಕೆ ಡಿ.ಕೆ.ಶಿವಕುಮಾ‌ರ್ ಕುಟುಂಬ ಸದಸ್ಯರು ಪ್ರವೇಶಿಸಿದಂತಾಗಿದೆ. ಹೀಗಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನ ಡಿಸಿಎಂ ಸಹೋದರ ಸುರೇಶ್‌ಗೇ ಗಟ್ಟಿ ಎನ್ನಲಾಗಿತ್ತು. ಅದರ ಬೆನ್ನಲ್ಲೇ ಕೊಪ್ಪಳ ಕಾಂಗ್ರೆಸ್‌ ಶಾಸಕ ರಾಘವೇಂದ್ರ ಹಿಟ್ನಾಳ್ ಕೂಡ ರಾಬಕೊವಿ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದು, ಭೀಮಾ ನಾಯ್ಕ ಮರು ಆಯ್ಕೆಗೆ ತಣ್ಣೀರು ಎರಚಿದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಿಟ್ನಾಳ್‌ ಕೂಡ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಆಗಲಿದ್ದಾರೆ ಎನ್ನಲಾಗಿದೆ. ಇದು ಸಿಎಂ-ಡಿಸಿಎಂ ಬಣದ ನಡುವೆ ಬಲಾಬಲ ಪ್ರದರ್ಶನಕ್ಕೆ ದಾರಿ ಮಾಡಿಕೊಡಬಹುದು.

ಕೊಟ್ಟ ಮಾತು ಉಳಿಸಿಕೊಳ್ಳುವ ಒತ್ತಡ

ಇದೆಲ್ಲದರ ನಡುವೆ ಮಾಲೂರು ಶಾಸಕರೂ ಆಗಿರುವ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡ ಕೂಡ ಕೆಎಂಎಫ್ ಅಧ್ಯಕ್ಷ ಗದ್ದುಗೆ ಏರಲು ಮತ್ತೂಮ್ಮೆ ತಯಾರಿ ಮಾಡಿಕೊಂಡಿದ್ದಾರೆ. ಈ ಹಿಂದೆ ಮಾಲೂರು ಶಾಸಕ ಕೆ.ವೈ.ನಂಜೇಗೌಡರು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ಕೊಟ್ಟಾಗ ಭೀಮಾ ನಾಯ್ಕಗಾಗಿ ಸಿಎಂ, ಸಚಿವ ಬೈರತಿ ಸುರೇಶ್ ಅವರು ನಂಜೇಗೌಡರ ಮನವೊಲಿಸಿದ್ದರು. ಅಲ್ಲದೆ, ಡಿ.ಕೆ. ಶಿವಕುಮಾ‌ರ್ ಹಾಗೂ ಡಿ.ಕೆ.ಸುರೇಶ್ ನಂಜೇಗೌಡರ ಪರ ನಿಂತಿದ್ದರು. ಆಗ ಕೊಟ್ಟ ಮಾತು ಈಗ ಉಳಿಸಿಕೊಳ್ಳುವಂತೆ ನಂಜೇಗೌಡ ಪಟ್ಟು ಹಿಡಿಯುವ ಸಾಧ್ಯತೆ ಇದ್ದು ಇದು ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ತಲೆನೋವಾಗುವ ಸಾಧ್ಯತೆಗಳಿವೆ.

ನಾನಂತೂ ಪ್ರಬಲ ಆಕಾಂಕ್ಷಿ ಇದ್ದೇನೆ

ಭೀಮಾ ನಾಯ್ಕ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡುವಾಗ ಸಿಎಂ ಹಾಗೂ ಡಿಸಿಎಂ, ಡಿ.ಕೆ. ಸುರೇಶ್ ಅವರು ನನಗೆ ಮಾತು ಕೊಟ್ಟಿದ್ದಾರೆ. ಯಾರ್ಯಾರು ಅಭ್ಯರ್ಥಿಗಳಾಗುತ್ತಾರೋ ಗೊತ್ತಿಲ್ಲ. ನಾನಂತೂ ಪ್ರಬಲ ಆಕಾಂಕ್ಷಿ ಇದ್ದೇನೆ. ನನಗೆ ಕೊಟ್ಟ ಮಾತನ್ನು ಎಲ್ಲರೂ ಉಳಿಸಿಕೊಳ್ಳುತ್ತಾರೆ ಎಂದುಕೊಂಡಿದ್ದೇನೆ.-ಕೆ.ವೈ.ನಂಜೇಗೌಡ, ಮಾಲೂರು ಕಾಂಗ್ರೆಸ್ ಶಾಸಕ

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!