ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಕಿಚ್ಚು ಜೋರಾಗಿ ಏರುಧ್ವನಿಯಲ್ಲಿ ಮಾತುಕತೆ ಆಗಿದೆ ಎನ್ನಲಾಗಿದೆ. ಜಾತಿ ಮುಂದೂಡಿಕೆಗೆ ಸಚಿವರಿಂದ ಒತ್ತಡ ಹೆಚ್ಚಾಗಿದ್ದು, ಹೊಸದಾಗಿ 331 ಜಾತಿಗಳ ಸೇರ್ಪಡೆಗೂ ಆಕ್ಷೇಪ ವ್ಯಕ್ತವಾಗಿದೆ. ಡಿಸಿಎಂ ಡಿಕೆಶಿ ಸೇರಿದಂತೆ ಹಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿ, ಜಾತಿಗಣತಿ (Caste Census) ಮುಂದೂಡಿಕೆಗೆ ಒತ್ತಡ ಹಾಕಿದ್ದಾರೆ. ಈಗ ಜಾತಿಗಣತಿ ನಡೆದರೆ ಸರ್ಕಾರಕ್ಕೆ ತೊಂದರೆ, ಡ್ಯಾಮೇಜ್ ಆಗುತ್ತೆ, ಮುಂದೂಡೋಣ ಎಂದು ಡಿಕೆಶಿ ಪ್ರಸ್ತಾಪಿಸಿದ್ದಾರೆ.ಇನ್ನು ಕೆಲವು ಸಚಿವರು ಮಾತನಾಡಿ, ಜಾತಿಗಣತಿಯಲ್ಲಿ ಹಲವು ಗೊಂದಲಗಳು ಇವೆ, ಗೊಂದಲಗಳನ್ನ ಸರಿಪಡಿಸದ ಹೊರತು ಜಾತಿಗಣತಿ ಬೇಡ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಂತಾ ಜನರಿಗೆ ಮನವರಿಕೆ ಮಾಡಿ ಕೊಡಲು ಆಗುತ್ತಾ ಎಂದು ಸಚಿವರು ಆಕ್ಷೇಪ ಎತ್ತಿದ್ದಾರೆ.
ಇದೇ ವೇಳೆ ಸಿಎಂ ಸಿದ್ದರಾಮಯ್ಯ (Siddaramaiah) ಕೂಡ ಜಾತಿಗಣತಿ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದು, ಜಾತಿ ಗಣತಿ ನಡೆದರೂ, ನಡೆಯದಿದ್ದರೂ ನನ್ನ ಮೇಲ್ವರ್ಗದ ವಿರೋಧಿ ಅಂತಾರೆ, ಪಟ್ಟ ಕಟ್ಟಿದ್ದಾರೆ, ಅಹಿಂದ ಪರ ಅಂತಾರೆ ಎಂದು ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ. ಹಾಗಾಗಿ ಸಚಿವರು ವಿಶೇಷ ಸಭೆ ನಡೆಸಿ ವರದಿ ಕೊಡಿ ಎಂದು ಸಿಎಂ ಸೂಚಿಸಿ ಚರ್ಚೆ ಮುಗಿಸಿದ್ದಾರೆ ಎನ್ನಲಾಗಿದೆ.











































