ಹೊಸಪೇಟೆ: ಜಗತ್ತಿನಲ್ಲಿ ಇರುವುದೊಂದೇ ಮೂಲರಾಮಚಂದ್ರದೇವರು. ಅದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.ಐತಿಹಾಸಿಕ ಹಂಪಿ ಶ್ರೀ ರಘುನಂದನ ತೀರ್ಥರ ಮಠದ ಮೂಲ ಬೃಂದಾವನ ಸನ್ನಿಧಿಯಲ್ಲಿ ಬುಧವಾರ ರಘುನಂದನ ತೀರ್ಥರ ಮಧ್ಯಾರಾಧನೆ ನಿಮಿತ್ತ ಶ್ರೀಮೂಲರಾಮಚಂದ್ರ ದೇವರ ಸಂಸ್ಥಾನ ಪೂಜೆ ನೆರವೇರಿಸಿ ಅವರು ಅನುಗ್ರಹ ಸಂದೇಶ ನೀಡಿದರು.
ಜಗದ್ಗುರು ಶ್ರೀಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ವಿದ್ಯಾಮಠ (ಶ್ರೀರಾಘವೇಂದ್ರ ಸ್ವಾಮಿ ಮಠ)ಕ್ಕೆ ಪರಂಪರಾಗತವಾಗಿ ಸೇರಿದ ಮೂಲ ರಾಮದೇವರನ್ನು ಮರಳಿ ಶ್ರೀಮಠಕ್ಕೆ ತಂದುಕೊಟ್ಟವರು ಶ್ರೀ ರಘುನಂದನ ತೀರ್ಥರು. ಮೂಲರಾಮನ ಲಕ್ಷಣಗಳನ್ನು ನೋಡಿದರೆ ಇದೇ ಮೂಲ ರಾಮಚಂದ್ರದೇವರು ಎಂಬುದು ತಿಳಿಯುತ್ತದೆ. ಜಗತ್ತಿನಲ್ಲಿ ಯಾರು ಮೂಲರಾಮ ನಮ್ಮಲ್ಲಿದೆ ಎನ್ನುತ್ತಾರೋ ಅವರು ಎಲ್ಲಿಯೂ ಭಕ್ತರಿಗೆ ವಿಶ್ವರೂಪ ದರ್ಶನ ಮಾಡಿಸುವ ಧೈರ್ಯ ಮಾಡಿಲ್ಲ. ಆದರೆ, ಶ್ರೀರಾಯರ ಮಠದಲ್ಲಿ ಭಕ್ತರಿಗೆ ನಿರಂತರವಾಗಿ ಯಾವುದೇ ಜಾತಿ-ಮತ-ಮಠ ಭೇದವಿಲ್ಲದೆ ಮೂಲರಾಮನ ವಿಶ್ವರೂಪ ದರ್ಶನ ಲಭಿಸುತ್ತಿದೆ ಎಂದು ಹೇಳಿದರು.











































