ರಾಜರಾಜೇಶ್ವರಿ ನಗರ: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಎಚ್.ಎನ್.ಅಶೋಕ್, ಎಂ.ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಇಲಾಖೆ ಉಪ ನಿರ್ದೇಶಕ ಸಲೀಂ ಅವರು ಆಯ್ಕೆಯನ್ನು ಪ್ರಕಟಿಸಿದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಜಿಲ್ಲೆಗಳು ಈ ಬ್ಯಾಂಕ್ ವ್ಯಾಪ್ತಿಗೆ ಸೇರುತ್ತವೆ.ಎಚ್.ಎನ್.ಅಶೋಕ್ ಮಾತನಾಡಿ, ‘ರೈತರು, ಸ್ತ್ರೀ ಶಕ್ತಿ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಸ್ವಯಂ ಉದ್ಯೋಗ, ಗೃಹ ನಿರ್ಮಾಣ, ವಾಣಿಜ್ಯ ಸಂಕೀರ್ಣ, ವಾಹನ ಖರೀದಿ, ಪಶುಸಂಗೋಪನೆ ಚಟುವಟಿಕೆಗೆ ಶೇ 3ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು’ ಎಂದರು.ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಸಹೋದರ ಅಶೋಕ್ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ನಿರ್ದೇಶಕರಾದ ಎಂ.ಡಿ.ವಿಜಯದೇವ್, ವೈ.ಎಚ್.ಮಂಜು, ಕೃಷ್ಣಮೂರ್ತಿ, ಹಾಪ್ಕಾಮ್ಸ್ ಮಾಜಿ ಅಧ್ಯಕ್ಷ ಬಾಬು ಉಪಸ್ಥಿತರಿದ್ದರು.













































