ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು ಭಾರತದಲ್ಲಿ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಮೂಲಕ, ದೇಶಾದ್ಯಂತ ಕೋಟ್ಯಂತರ ರೈತರು ನೇರ ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಕೃಷಿಯಲ್ಲಿ ಹೂಡಿಕೆ ಮಾಡಲು ಕಷ್ಟಪಡುತ್ತಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದು ಒಂದು ದೊಡ್ಡ ವರದಾನವಾಗಿದೆ. ಅನೇಕ ಸರ್ಕಾರಿ ಯೋಜನೆಗಳಿದ್ದರೂ, ಇದರ ಜನಪ್ರಿಯತೆ ತುಂಬಾ ಹೆಚ್ಚಾಗಿದೆ. ಅದಕ್ಕಾಗಿಯೇ ರೈತರು ಈ ಯೋಜನೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಯಾವಾಗಲೂ ಕುತೂಹಲದಿಂದ ಕಾಯುತ್ತಿದ್ದಾರೆ.
ಇನ್ನು, PM-KISAN ಯೋಜನೆ 2019ರಲ್ಲಿ ಆರಂಭವಾದಾಗಿನಿಂದಲೇ ರೈತರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ರೂಪಾಯಿಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಮಧ್ಯವರ್ತಿಗಳಿಲ್ಲದೆ ಹಣ ತಲುಪುವುದರಿಂದ ಪಾರದರ್ಶಕತೆ ಹೆಚ್ಚಿದ್ದು, ಸರ್ಕಾರದ ಮೇಲಿನ ನಂಬಿಕೆ ಬಲಗೊಂಡಿದೆ. ಬೀಜ, ರಸಗೊಬ್ಬರ ಮತ್ತು ಇತರೆ ಮೂಲಭೂತ ಅಗತ್ಯಗಳಿಗೆ ಈ ಮೊತ್ತ ರೈತರಿಗೆ ಸಹಾಯವಾಗುತ್ತಿದೆ.
22ನೇ ಕಂತಿನ ನಿರೀಕ್ಷೆ: ಪ್ರಸ್ತುತ ದೇಶಾದ್ಯಂತ ಲಕ್ಷಾಂತರ ರೈತರು 22ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಪ್ರತಿಯೊಂದು ಕಂತು ಬಿಡುಗಡೆಯಾಗುವಾಗ ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ನೇರ ಲಾಭಾಂಶ ವರ್ಗಾವಣೆಯ ಮೂಲಕ ಬಿಡುಗಡೆ ಮಾಡುತ್ತದೆ. ಈ ಹಣ ಕೃಷಿ ಹಂಗಾಮಿನ ಸಮಯದಲ್ಲಿ ರೈತರಿಗೆ ದೊಡ್ಡ ನೆರವಾಗುತ್ತದೆ. ಹೀಗಾಗಿ ಮುಂದಿನ ಕಂತು ಯಾವಾಗ ಜಮಾ ಆಗಲಿದೆ ಎಂಬ ಪ್ರಶ್ನೆ ಗ್ರಾಮೀಣ ಭಾರತದಲ್ಲಿ ಚರ್ಚೆಯ ವಿಷಯವಾಗಿದೆ.
ಬಜೆಟ್ ಮತ್ತು ಪಿಎಂ ಕಿಸಾನ್ ನಿಧಿ: ಪ್ರತಿ ವರ್ಷ ಕೇಂದ್ರ ಸರ್ಕಾರ ಬಜೆಟ್ ಮೂಲಕ ಪಿಎಂ ಕಿಸಾನ್ ಯೋಜನೆಗೆ ಅಗತ್ಯ ಹಣವನ್ನು ಮೀಸಲಿಡುತ್ತದೆ. 2024-25 ಆರ್ಥಿಕ ವರ್ಷದಲ್ಲಿ ಆರಂಭದಲ್ಲಿ 60,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ನಂತರ ಅಗತ್ಯದ ಮೇರೆಗೆ ಈ ಮೊತ್ತವನ್ನು 63,500 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದು ಸರ್ಕಾರ ಕೃಷಿ ಮತ್ತು ರೈತ ಕಲ್ಯಾಣಕ್ಕೆ ನೀಡುತ್ತಿರುವ ಆದ್ಯತೆಯನ್ನು ತೋರಿಸುತ್ತದೆ. ಲಾಭಾಂಶ ಪಡೆಯುವ ರೈತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಜೆಟ್ ಒತ್ತಡವೂ ಹೆಚ್ಚುತ್ತಿದೆ.
ಹಿಂದಿನ ವರ್ಷಗಳ ವೆಚ್ಚದ ಚಿತ್ರ: 2023-24 ಆರ್ಥಿಕ ವರ್ಷದಲ್ಲಿ ಪಿಎಂ ಕಿಸಾನ್ ಯೋಜನೆಗೆ 61,440.74 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಮಾತ್ರವೇ ಈ ಯೋಜನೆಯ ಬಜೆಟ್ ಸುಮಾರು 2,059 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಇದರಿಂದ ಸರ್ಕಾರ ಕ್ರಮೇಣ ಈ ಯೋಜನೆಯನ್ನು ವಿಸ್ತರಿಸುತ್ತಿರುವುದು ಸ್ಪಷ್ಟವಾಗುತ್ತದೆ. ಹೆಚ್ಚುತ್ತಿರುವ ಕೃಷಿ ವೆಚ್ಚಗಳಿಗೆ ಅನುಗುಣವಾಗಿ ಈ ನೆರವು ರೈತರಿಗೆ ಒಂದು ಭದ್ರತಾ ಕವಚವಾಗುತ್ತಿದೆ.
2026ರ ಬಜೆಟ್ ಮೇಲೆ ನಿರೀಕ್ಷೆ: ಮುಂದಿನ ವರ್ಷದ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026ರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂಬ ನಿರೀಕ್ಷೆ ಇದೆ. ವಿಶೇಷವಾಗಿ ಪಿಎಂ ಕಿಸಾನ್ ಯೋಜನೆಗೆ ಮೀಸಲಾದ ಮೊತ್ತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸುತ್ತಿದ್ದಾರೆ. ಬಜೆಟ್ ನಿರ್ಧಾರಗಳು ದೇಶದ ಕೋಟ್ಯಂತರ ರೈತರ ಭವಿಷ್ಯಕ್ಕೆ ನೇರವಾಗಿ ಸಂಬಂಧಿಸಿದ್ದಾಗಿವೆ.
ವಾರ್ಷಿಕ ನೆರವು ಹೆಚ್ಚುವ ಸಾಧ್ಯತೆ: ರೈತರಿಗೆ ವರ್ಷಕ್ಕೆ ನೀಡಲಾಗುತ್ತಿರುವ 6,000 ರೂಪಾಯಿಗಳ ನೆರವನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಬಹುಕಾಲದಿಂದ ಕೇಳಿಬರುತ್ತಿದೆ. ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಅಭಿಪ್ರಾಯ ರೈತ ಸಂಘಟನೆಗಳಲ್ಲಿ ಇದೆ. ಸರ್ಕಾರ ಈ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದರೆ, ಪಿಎಂ ಕಿಸಾನ್ ಬಜೆಟ್ ಕೂಡ ಗಣನೀಯವಾಗಿ ಹೆಚ್ಚಬೇಕಾಗುತ್ತದೆ. ಇದರಿಂದ ಗ್ರಾಮೀಣ ಆರ್ಥಿಕತೆಯಲ್ಲಿ ಹಣದ ಹರಿವು ಹೆಚ್ಚಾಗಿ, ಖರ್ಚು ಮತ್ತು ಹೂಡಿಕೆ ಚಟುವಟಿಕೆಗಳು ಬಲಪಡಿಸುವ ಸಾಧ್ಯತೆ ಇದೆ.
ಇನ್ನು ಈ ಯೋಜನೆಯಿಂದ ದೊರೆಯುವ ಹಣ ಸಣ್ಣದಾಗಿ ಕಂಡರೂ, ರೈತರ ದಿನನಿತ್ಯದ ಅಗತ್ಯಗಳಿಗೆ ಇದು ದೊಡ್ಡ ನೆರವಾಗಿದೆ. ಕೃಷಿ ಆರಂಭದ ಹಂತದಲ್ಲಿ ಸಾಲದ ಅವಶ್ಯಕತೆ ಕಡಿಮೆಯಾಗುತ್ತದೆ. ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದು ಆರ್ಥಿಕ ಭದ್ರತೆಯ ಭಾವನೆಯನ್ನು ನೀಡಿದೆ. ಹೀಗಾಗಿ ಮುಂದಿನ ಬಜೆಟ್ನಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳತ್ತ ರೈತ ಸಮುದಾಯ ನಿರೀಕ್ಷೆಯೊಂದಿಗೆ ನೋಡುತ್ತಿದೆ.













































