ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ-1ರಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮಾ.22ರಂದು ಆರಂಭವಾಗಲಿದೆ. ಈಗಾಗಲೇ 32 ಸಾವಿರ ಉಪನ್ಯಾಸಕರು ಮೌಲ್ಯಮಾಪನ ಕಾರ್ಯಕ್ಕೆ ನೋಂದಣಿ ಮಾಡಿಕೊಂಡಿದ್ದು, ಭಾನುವಾರದಿಂದಲೇ ಹಾಜರಾಗುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (ಕೆಎಸ್ಇಎಬಿ) ಸೂಚನೆ ನೀಡಿದೆ. ಇನ್ನು ಪರೀಕ್ಷೆ ಕಾರ್ಯಕ್ಕೂ ಮೊದಲು ಉತ್ತರ ಪತ್ರಿಕೆಗಳ ಕೋಡಿಂಗ್ ಕೆಲಸವು ಮಾ.17ರಂದು ಆರಂಭವಾಗಿದ್ದು, ಬಹುತೇಕ ಮುಗಿದಿದೆ. ಜಿಲ್ಲಾ ಹಂತದಲ್ಲಿ ಉತ್ತರ ಪತ್ರಿಕೆಗಳ ಹಂಚಿಕೆ ಕಾರ್ಯ ಮುಗಿದಿದೆ. ಭಾನುವಾರವೇ ಮೌಲ್ಯ ಮಾಪನ ಕಾರ್ಯ ಸಂಪೂರ್ಣವಾಗಿ ಆರಂಭವಾಗಲಿದೆ ಎಂದು ಮಂಡಳಿಯ ಅಧ್ಯಕ್ಷ ಪ್ರಕಾಶ್ ಜಿ.ಟಿ. ನಿಟ್ಟಾಲಿ ತಿಳಿಸಿದ್ದಾರೆ. ಫಲಿತಾಂಶವನ್ನು ನಿಗದಿತ ಸಮಯದಲ್ಲಿ
ನೀಡಬೇಕೆಂಬ ಉದ್ದೇಶದಿಂದ ಸರ್ಕಾರಿ, ಅನುದಾನಿತ, ಖಾಸಗಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಉಪನ್ಯಾಸಕರನ್ನು ಸಹ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಏ.7ಕ್ಕೆ ಫಲಿತಾಂಶ ಗುರಿ:
ಮಂಡಳಿಯು ಈಗಾಗಲೇಪ್ರಕಟಿಸಿರುವಂತೆ ಏ.7 ರಂದು ಫಲಿತಾಂಶ ನೀಡುವ ಗುರಿ ಹೊಂದಿದೆ. ಮಾ.22ರಿಂದ ಏ.2ರವರೆಗೆ ಮೌಲ್ಯ ಮಾಪನ ಕಾರ್ಯ ಮುಗಿಯಲಿದೆ. ಉಳಿದ ತಾಂತ್ರಿಕ ಕೆಲಸಗಳನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳಿಸಿ ಏ.7ರಂದು ಫಲಿತಾಂಶ ನೀಡುವ ಉದ್ದೇಶವಿದೆ. ಉಪನ್ಯಾಸಕರ ಸಂಘವು ಮೌಲ್ಯಮಾಪನ ಕಾರ್ಯಕ್ಕೆ ಒಪ್ಪಿಕೊಂಡಿರುವುದರಿಂದ ಸುಸೂತ್ರವಾಗಿ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಫೆ.29ರಿಂದ ಮಾ.17ರವರೆಗೆ ನಡೆದಿದ್ದ ಪರೀಕ್ಷೆಯಲ್ಲಿ 7.10 ಲಕ್ಷ ವಿದ್ಯಾರ್ಥಿಗಳು ಭಾಗಿಯಾಗಿದ್ದರು.













































