ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಪ್ರಣಾಳಿಕೆ ಅನಾವರಣಗೊಳಿಸಿದ್ದು, ಮಹಿಳೆಯರ ಕಲ್ಯಾಣ ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದ ಹಲವು ಆಕರ್ಷಕ ಭರವಸೆಗಳನ್ನು ನೀಡಿದ್ದಾರೆ.ತಮಿಳು ಹೊಸ ವರ್ಷ ಮತ್ತು ಬಿ.ಆರ್. ಅಂಬೇಡ್ಕರ್ ಅವರ 150ನೇ ಜನ್ಮದಿನದ ಸಂದರ್ಭದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿರುವುದು “ಶುಭ ಸೂಚಕ” ಎಂದು ನಡ್ಡಾ ಬಣ್ಣಿಸಿದರು. ತಮಿಳುನಾಡಿನ ಸಂಸ್ಕೃತಿ ಮತ್ತು ಇತಿಹಾಸವನ್ನು ಶ್ಲಾಘಿಸಿದ ಅವರು, ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರಣಾಳಿಕೆಯ ಪ್ರಮುಖ ಭರವಸೆಗಳು
- ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ಆರ್ಥಿಕ ನೆರವು ಮತ್ತು ವರ್ಷಕ್ಕೆ 3 ಉಚಿತ ಎಲ್ಪಿಜಿ ಸಿಲಿಂಡರ್ ನೀಡುವ ಭರವಸೆ ನೀಡಲಾಗಿದೆ. ಅರ್ಹ ಮಹಿಳೆಯರಿಗೆ ಇ-ಸ್ಕೂಟರ್ ಖರೀದಿಸಲು 25,000 ರೂ. ಸಬ್ಸಿಡಿ ಘೋಷಿಸಲಾಗಿದೆ.
- ಜೀವನ ವೆಚ್ಚ ಮತ್ತು ತೆರಿಗೆ ಏರಿಕೆಯನ್ನು ಸರಿದೂಗಿಸಲು ಪ್ರತಿ ಕುಟುಂಬಕ್ಕೆ ಒಂದು ಬಾರಿ 10,000 ರೂ. ನಗದು ನೆರವು ನೀಡಲಾಗುವುದು. ಮೊದಲ ಬಾರಿ ಮನೆ ಖರೀದಿಸುವ ಮಹಿಳೆಯರಿಗೆ ಮುದ್ರಾಂಕ ಶುಲ್ಕದಲ್ಲಿ 3% ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ.
- ಜಲ್ಲಿಕಟ್ಟು ಹೋರಿಗಳನ್ನು ಸಾಕುವವರಿಗೆ ಮಾಸಿಕ 2,000 ರೂ. ನೆರವು ಮತ್ತು ಪಂದ್ಯದ ವೇಳೆ ಸಾವು ಸಂಭವಿಸಿದರೆ 10 ಲಕ್ಷ ರೂ. ಪರಿಹಾರ ಧನ ಘೋಷಿಸಲಾಗಿದೆ.
- ಪ್ರಮುಖ ದೇವಾಲಯಗಳಲ್ಲಿ ಸ್ಥಳೀಯ ನಿವಾಸಿಗಳಿಗಾಗಿ ಪ್ರತಿದಿನ ಎರಡು ಗಂಟೆಗಳ ವಿಶೇಷ ದರ್ಶನದ ಸಮಯವನ್ನು ಮೀಸಲಿಡಲಾಗುವುದು.
- ಶಾಲಾ-ಕಾಲೇಜು ಮತ್ತು ಬಸ್ಸುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಶೂನ್ಯ ಎಫ್ಐಆರ್ (Zero FIR) ಅನುಷ್ಠಾನ ಹಾಗೂ ಗಂಭೀರ ಅಪರಾಧಗಳ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ಭರವಸೆ ನೀಡಲಾಗಿದೆ.
ಡಿಎಂಕೆ ವಿರುದ್ಧ ವಾಗ್ದಾಳಿ
ತಮಿಳುನಾಡಿನಲ್ಲಿ ಮಾದಕ ದ್ರವ್ಯ ಪ್ರಕರಣಗಳು ಶೇ. 51ರಷ್ಟು ಹೆಚ್ಚಾಗಿವೆ ಎಂದು ಆರೋಪಿಸಿದ ಜೆ.ಪಿ. ನಡ್ಡಾ, ಡಿಎಂಕೆ ಪಕ್ಷವು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ಪೋಷಕ ಎಂದು ಟೀಕಿಸಿದರು. ನಗದು-ಉದ್ಯೋಗ ಹಗರಣ ಸೇರಿದಂತೆ ಹಲವು ಅಕ್ರಮಗಳಲ್ಲಿ ಡಿಎಂಕೆ ನಾಯಕರು ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದರು.











































