ಚಿನ್ನಸ್ವಾಮಿಯಲ್ಲಿ RCB ‘ರಾಜ’ ದರ್ಬಾರ್: ಲಕ್ಕೆ ವಿರುದ್ಧ ಬೆಂಗಳೂರಿಗೆ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಅಗ್ರಸ್ಥಾನ!

Picture of Savistara

Savistara

Bureau Report

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ 2026ರ 23ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್ ಸಿ ಬಿ) ತಂಡವು ಲಕ್ಕೋ ಸೂಪರ್ ಜಾಯಿಂಟ್ಸ್ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ರಸಿಖ್ ದಾರ್ ಮತ್ತು ಭುವನೇಶ್ವ‌ರ್ ಕುಮಾರ್ ಅವರ ಮಾರಕ ಬೌಲಿಂಗ್ ಹಾಗೂ ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆರ್ ಸಿ ಬಿ ಲೀಲಾಜಾಲವಾಗಿ ಗೆಲುವಿನ ದಡ ಸೇರಿದೆ.

ಟಾಸ್‌ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್ ಸಿ ಬಿ ನಾಯಕ ರಜತ್ ಪಾಟಿದಾರ್ ನಿರ್ಧಾರವನ್ನು ಬೌಲರ್ ಗಳು ಸಂಪೂರ್ಣವಾಗಿ ಸಮರ್ಥಿಸಿಕೊಂಡರು.ಮೊದಲು ಬ್ಯಾಟ್ ಮಾಡಿದ ಲಕ್ಕೋ ತಂಡವು ನಿಗದಿತ 20 ಓವರ್ ಗಳಲ್ಲಿ 146 ರನ್ ಗಳಿಗೆ ಆಲೌಟ್ ಆಯಿತು. ಲಕ್ಕೋ ಪರ ಮಿಚೆಲ್ ಮಾರ್ಷ್ (40 ರನ್), ಮುಕುಲ್ ಚೌಧರಿ (39 ರನ್) ಮತ್ತು ಆಯುಷ್ ಬದೋನಿ (38 ರನ್) ಮಾತ್ರ ಎರಡಂಕಿ ದಾಟಲು ಶಕ್ತರಾದರು. ಲಕ್ಕೋ ನಾಯಕ ರಿಷಭ್ ಪಂತ್ ಬ್ಯಾಟಿಂಗ್ ವೇಳೆ ಜೋಶ್ ಹೇಜಲ್ ವುಡ್ ಅವರ ಎಸೆತದಲ್ಲಿ ಗಾಯಗೊಂಡು ನಿರಾಸೆ ಅನುಭವಿಸಿದರು.

ಆರ್ ಸಿ ಬಿ ಪರ ಕರಾರುವಕ್ಕಾದ ದಾಳಿ ಸಂಘಟಿಸಿದ ರಸಿಖ್ ದಾರ್ ಕೇವಲ 24 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ 27 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಸ್ಪಿನ್ನರ್ ಕೃನಾಲ್ ಪಾಂಡ್ಯ 2 ಹಾಗೂ ಜೋಶ್ ಹೇಜಲ್ ವುಡ್ 1 ವಿಕೆಟ್ ಪಡೆದು ಲಕ್ಕೋ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

147 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ ಆರ್ ಸಿ ಬಿಗೆ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಕಣಕ್ಕಿಳಿದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಉತ್ತಮ ಆರಂಭ ಒದಗಿಸಿದರು.ಕೇವಲ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 49 ರನ್ ಸಿಡಿಸಿ ಕೊಹ್ಲಿ ಔಟಾದರು. ನಂತರ ಬಂದ ನಾಯಕ ರಜತ್ ಪಾಟಿದಾರ್ (27 ರನ್, 13 ಎಸೆತ) ಹಾಗೂ ಜಿತೇಶ್ ಶರ್ಮಾ (23 ರನ್, 9 ಎಸೆತ) ಬಿರುಸಿನ ಬ್ಯಾಟಿಂಗ್ ನಡೆಸಿದರು. ಅಂತಿಮವಾಗಿ ಆರ್ ಸಿ ಬಿ 15.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್ ಗಳಿಸುವ ಮೂಲಕ ಇನ್ನು 29 ಎಸೆತಗಳು ಬಾಕಿ ಇರುವಂತೆಯೇ ಸುಲಭ ಗೆಲುವು ಸಾಧಿಸಿತು. ಲಕ್ಕೋ ಪರ ಪ್ರಿನ್ಸ್ ಯಾದವ್ 3 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಲಕ್ನೋ ಸೂಪರ್ ಜಾಯಿಂಟ್ಸ್: 146/10 (20 ಓವರ್) – ಮಿಚೆಲ್ ಮಾರ್ಷ್ 40, ಮುಕುಲ್ ಚೌಧರಿ 39; ರಸಿಖ್ ದಾರ್ 4/24, ಭುವನೇಶ್ವರ್ ಕುಮಾರ್ 3/27.

ರಾಯಲ್ ಚಾಲೆಂಜರ್ಸ್ ಬೆಂಗಳೂರು:149/5 (15.1 ಓವರ್) – ವಿರಾಟ್ ಕೊಹ್ಲಿ 49, ರಜತ್ ಪಾಟಿದಾರ್ 27; ಪ್ರಿನ್ಸ್ ಯಾದವ್ 3/32.

[t4b-ticker]
error: Content is protected !!