ಮಂಗಳೂರು: ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಐತಿಹಾಸಿಕವಾದ ’ನಾರಿ ಶಕ್ತಿ ವಂದನ್ ಅಧಿನಿಯಮʼದ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ವಿವಿಧ ಕ್ಷೇತ್ರಗಳ ಮಹಿಳೆಯರೊಂದಿಗೆ ಮಂಗಳೂರಿನಲ್ಲಿ ನಾರಿ ಶಕ್ತಿ ವಂದನ್ ಸಮ್ಮೇಳನ ಆಯೋಜಿಸಿದ್ದು, ಈ ವೇಳೆ ಮಹಿಳೆಯರು ವ್ಯಕ್ತಪಡಿಸಿರುವ ಅಭೂತಪೂರ್ವ ಬೆಂಬಲ, ಸಂತಸ ಹಾಗೂ ಕೃತಜ್ಞತೆ ಮಾತುಗಳನ್ನು ಪ್ರಧಾನಮಂತ್ರಿ ಮೋದಿ ಅವರಿಗೆ ತಲುಪಿಸುವುದಾಗಿ ತಿಳಿಸಿದರು.

ದೇಶದಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಹೆಚ್ಚಿನ ಅವಕಾಶ-ಪ್ರಾತಿನಿಧ್ಯ ನೀಡುವ ಮೂಲಕ ಅವರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆಗೆ ಮುನ್ನುಡಿ ಬರೆಯಲಿರುವ ಈ ನಾರಿ ಶಕ್ತಿ ವಂದನ್ ಅಧಿನಿಯಮ ಜಾರಿ ಬಗ್ಗೆ ಮಹಿಳೆಯರಲ್ಲಿರುವ ಭಾವನೆ, ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವುದು ಈ ಸಮ್ಮೇಳನದ ಪ್ರಮುಖ ಆಶಯವಾಗಿತ್ತು. ಅದರಂತೆ ಕ್ಯಾ. ಚೌಟ ಅವರು ಆಯೋಜಿಸಿದ್ದ ಸಮ್ಮೇಳನದಲ್ಲಿ ವೈದ್ಯರು, ಶಿಕ್ಷಕರು, ಉದ್ಯಮಿಗಳು, ಕ್ರೀಡಾಪಟುಗಳು, ಪತ್ರಕರ್ತೆಯರು ಮೀನುಗಾರಿಕೆ ಮತ್ತು ಕಾರ್ಮಿಕ ಸಮುದಾಯ ಸೇರಿದಂತೆ ವಿವಿಧ ವಲಯಗಳಲ್ಲಿ ಗುರುತಿಸಿಕೊಂಡಿರುವ ಮಹಿಳೆಯರು-ಯುವತಿಯರು ಹಾಗೂ ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ವಿವಿಧ ರಂಗದ ಮಹಿಳೆಯರು ಈ ಅಧಿನಿಯಮವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು. ರಾಜಕೀಯ ಕ್ಷೇತ್ರದ ಮೂಲಕ ದೇಶ ಸೇವೆ ಮಾಡಲು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವುದು ಪ್ರತಿಯೊಬ್ಬ ಹೆಣ್ಣುಮಗಳಿಗೂ ಹೆಮ್ಮೆಯ ಸಂಗತಿಯಾಗಿದೆ. ದಶಕಗಳಿಂದ ಕೇವಲ ಚರ್ಚೆಯ ಹಂತದಲ್ಲಿದ್ದ ಈ ವಿಚಾರಕ್ಕೆ ಮರುಜೀವ ನೀಡಿ, ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಅಡಿಪಾಯ ಹಾಕಿದೆ. ಇಂತಹ ಶ್ರೇಷ್ಟ ಚಿಂತನೆಯುಳ್ಳ ಪ್ರಧಾನಿ ಮೋದಿಯವರಂತಹ ನಾಯಕತ್ವ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ.

ಮಹಿಳಾ ಮೀಸಲಾತಿ ಜಾರಿ ಕುರಿತು ಈ ಹಿಂದೆ ಎದುರಾಗಿದ್ದ ಅಡೆತಡೆಗಳನ್ನು ನಿವಾರಿಸಿ, ಸರ್ಕಾರವು ಕೈಗೊಂಡಿರುವ ಈ ದಿಟ್ಟ ಹೆಜ್ಜೆಯು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದು ಎಂದು ಮಹಿಳೆಯರು ಹರ್ಷ ವ್ಯಕ್ತಪಡಿಸಿದರು.ಇದೇ ವೇಳೆ ಸಮ್ಮೇಳನದಲ್ಲಿ ತಮ್ಮ ಅಭಿಪ್ರಾಯಗಳನ್ನು ಪೋಸ್ಟ್ ಕಾರ್ಡ್ ಮೂಲಕ ನೇರವಾಗಿ ಪ್ರಧಾನಿಯವರೊಂದಿಗೆ ಹಂಚಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು.











































