ಲಂಡನ್: ಬಹುಕೋಟಿ ವಂಚನೆ ಆರೋಪಿ ನೀರವ್ಮೋದಿಯ ಗಡೀಪಾರು ಪ್ರಕ್ರಿಯೆ ವಿಧಿವಿಧಾನಗಳನ್ನು ಅಂತಿಮಪಡಿಸಲು ಸಿಬಿಐ ಅಧಿಕಾರಿಗಳ ತಂಡ ಲಂಡನ್ ಗೆ ಆಗಮಿಸಿದ ಬೆನ್ನಲ್ಲೇ, ಲಂಡನ್ ನಿಂದ ತೆರವುಗೊಳಿಸುವ ಕ್ರಮದ ವಿರುದ್ಧ ನೀರವ್ ಮೋದಿ ಫ್ರಾನ್ಸ್ ನಲ್ಲಿರುವ ಯೂರೋಪಿಯನ್ ಕೋರ್ಟ್ ಆಫ್ ಪ್ಯೂಮನ್ ರೈಟ್ಸ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.”ನೀರವ್ ಮೋದಿ ಗಡೀಪಾರು ಕಾಲ ಸನ್ನಿಹಿತವಾಗಿದೆ. ಆದರೆ ಆತ 39ನೇ ನಿಯಮದಡಿ ಲಂಡನ್ ನಿಂದ ತೆರವುಗೊಳಿಸುವ ವಿರುದ್ಧ ಮಾನವಹಕ್ಕು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದಾಗ್ಯೂ ನಾವು ಆ ಪ್ರಕರಣದಲ್ಲಿ ಸೇರಿಲ್ಲ” ಎಂದು ಕ್ರೌನ್ ಪ್ರಾಸಿಕ್ಯೂಶನ್ ಸರ್ವೀಸ್ ವಕ್ತಾರರು ಪ್ರಕಟಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 100 ಕೋಟಿ ಡಾಲರ್ಗೂ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 55 ವರ್ಷದ ವಜ್ರದ ವ್ಯಾಪಾರಿಯ ಗಡೀಪಾರು ಆದೇಶವನ್ನು ಪ್ರಶ್ನಿಸಿ ಲಂಡನ್ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ಮಾರ್ಚ್ 25ರಂದು ವಜಾಗೊಂಡಿತ್ತು. ಗಡೀಪಾರು ವಿರುದ್ಧ ತಾವು ಸಲ್ಲಿಸಿದ್ದ ಮೂಲ ಅರ್ಜಿಯ ಮರು ವಿಚಾರಣೆ ನಡೆಸುವಂತೆ ನೀರವ್ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 15ರಿಂದ 28 ದಿನಗಳ ಒಳಗಾಗಿ ಸಿಬಿಐಗೆ ಆರೋಪಿಯನ್ನು ವಶಕ್ಕೆ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ 39ನೇ ನಿಯಮದ ಅಡಿ ಸಲ್ಲಿಸಿದ ಅರ್ಜಿ ಪರಿಗಣನೆ ಹಂತದಲ್ಲಿರುವುದರಿಂದ ಆರೋಪಿಯನ್ನು ಕರೆದೊಯ್ಯಲು ಸಾಧ್ಯವಿಲ್ಲ. ನೀರವ್ ಮೋದಿಗೆ ಗಡೀಪಾರು ವಿರುದ್ಧ ಇದ್ದ ಏಕೈಕ ಅವಕಾಶ ಇದಾಗಿತ್ತು.”ಈ ಅರ್ಜಿಯ ವಿಚಾರಣೆ ಇರುವುದಿಲ್ಲ. ಎಲ್ಲವೂ ಲಿಖಿತವಾಗಿ ನಡೆಯುತ್ತದೆ. ಮಾನವಹಕ್ಕು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾದ ತಕ್ಷಣ ಸಾಮಾನ್ಯವಾಗಿ 48 ಗಂಟೆಗಳ ಒಳಗಾಗಿ ನಿರ್ಧಾರ ಬರುತ್ತದೆ” ಎಂದು ಗಡೀಪಾರು ಬ್ಯಾರಿಸ್ಟರ್ ಬೆನ್ ಕೀತ್ ಸ್ಪಷ್ಟಪಡಿಸಿದ್ದಾರೆ.












































