ಸ್ತ್ರೀ ನಮನ ಕಾರ್ಯಕ್ರಮ ಯಶಸ್ವಿ

ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ (ರಿ.), ಜಾಲಿ – ಭಟ್ಕಳ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸ್ತ್ರೀ ನಮನ ಕಾರ್ಯಕ್ರಮವನ್ನು ಜಾಲಿಯ ನಾಮಧಾರಿ ಸಭಾಭವನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಲಕ್ಷ್ಮೀ ಕೋಂ ತಿಮ್ಮಯ್ಯ ನಾಯ್ಕ (ಜಾಲಿ) ಹಾಗೂ ಮಳ್ಳಿ ಕೋಂ ದುರ್ಗಪ್ಪ ನಾಯ್ಕ (ಜಾಲಿ) ಅವರು ಸೂಲಗಿತ್ತಿಗಳಾಗಿ ನೂರಕ್ಕೂ ಅಧಿಕ ಹೆರಿಗೆಗಳಿಗೆ ಸಹಾಯ ಮಾಡಿದಕ್ಕಾಗಿ ಹಾಗೂ ಮದುವೆ ಕಾರ್ಯಕ್ರಮಗಳಲ್ಲಿ ಸಾಂಪ್ರದಾಯಿಕ ಶೋಭನ ಗೀತೆಗಳನ್ನು ಹಾಡಿ ಸಮಾಜ ಸೇವೆ ಸಲ್ಲಿಸಿರುವ ಹಿನ್ನೆಲೆ ಸನ್ಮಾನಿಸಲಾಯಿತು. ಹಾಗೆಯೇ ಆಶಾ ಕಾರ್ಯಕರ್ತೆಯಾದ ಸೋಮಾವತಿ ರಾಮಕೃಷ್ಣ ಮೊಗೇರ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಹಾಗೂ ಫೌಂಡೇಶನ್ ಸದಸ್ಯರಾದ ಶ್ರೀಮತಿ ಸುಜಾತಾ ನೀಲೇಶ್ ಆಚಾರ್ಯ ಹಾಗೂ ವೈದ್ಯರಾದ ಮೇಘನ ಮೋಗರ ಅವರಿಗೂ ಸನ್ಮಾನ ಮಾಡಲಾಯಿತು.ಕಾರ್ಯಕ್ರಮದ ಉದ್ಘಾಟಕರಾಗಿ ಶಿಕ್ಷಕಿ ಶ್ವೇತಾ ರಾಠೋಡ್ ಅವರು ಮಹಿಳಾ ನಾಯಕತ್ವದ ಕುರಿತು ಉಪನ್ಯಾಸ ನೀಡಿ, ಫೌಂಡೇಶನ್ನ ಕಾರ್ಯಗಳನ್ನು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಅನುಷಾ ಶೇಖರ ಕುಮಾರ್ ನಾಯ್ಕ ಅವರು ಸ್ತ್ರೀ ನಮನ ಕಾರ್ಯಕ್ರಮದ ಮಹತ್ವವನ್ನು ಕೊಂಡಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಮತಿ ಪೂರ್ಣಿಮಾ ಸೋಮಕುಮಾರ್ ನಾಯ್ಕ ಅವರು ಫೌಂಡೇಶನ್ ವತಿಯಿಂದ ನಡೆದ ಹತ್ತಾರು ಜನಪರ ಕಾರ್ಯಕ್ರಮಗಳನ್ನು ವಿವರಿಸಿದರು.ಈ ಸಂದರ್ಭದಲ್ಲಿ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು, ನೃತ್ಯ ಹಾಗೂ ಗಾಯನ ಕಾರ್ಯಕ್ರಮಗಳು ಜರುಗಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಾಗಿ ಯಮುನಾ ಅಣ್ಣಪ್ಪ ಮೊಗೇರ, ಲೀಲಾವತಿ ಗಜಾನನ ಆಚಾರ್ಯ, ದಿವ್ಯಾ ಶ್ರೀಧರ್ ಖಾರ್ವಿ, ಶ್ರೀದೇವಿ ಗೊಂಡ ಹಾಗೂ ನೇತ್ರ ರಮೇಶ್ ನಾಯ್ಕ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಅನೇಕ ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮಕ್ಕೆ ಉತ್ಸಾಹ ತುಂಬಿದರು. ಮೂಕಾಂಬಿಕಾ ಮೊಗೇರ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಕಮಲಾಕ್ಷಿ ಗೊಂಡ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.













































