ಕಟ್ಟಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಮತುವಾ, ನಮಸುದ್ರ ಹಾಗೂ ಇನ್ನಿತರ ನಿರಾಶ್ರಿತ ಸಮುದಾಯಗಳಿಗೆ ಸಿಎಎ (ರಾಷ್ಟ್ರೀಯ ಪೌರತ್ವ ಕಾಯ್ದೆ) ಅಡಿಯಲ್ಲಿ ಪೌರತ್ವ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಅಲ್ಲದೇ ನುಸುಳುಕೋರರು ಗಂಟು ಮೂಟೆ ಕಟ್ಟಿ ಎಂದು ಎಚ್ಚರಿಕೆ ನೀಡಿದ್ದಾರೆ.
ಪೂರ್ವ ವರ್ಧಮಾನ್ ಜಿಲ್ಲೆಯ ಕಟ್ಟಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಮತುವಾ ಮತ್ತು ನಮಸುದ್ರ ಸಮುದಾಯಗಳ ಭವಿಷ್ಯವನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅಲ್ಲ, ಸಂವಿಧಾನ ಮತ್ತು ಸಿಎಎ ರಕ್ಷಿಸಿದೆ ಎಂದು ಹೇಳಿದ್ದಾರೆ. ಇವೆರಡು ದಕ್ಷಿಣ ಬಂಗಾಳದಲ್ಲಿ ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ನಿರಾಶ್ರಿತರ ಗುಂಪಾಗಿವೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಬಂದರೆ, ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಾತ್ರವಲ್ಲ ‘ಸಬ್ ಕಾ ಹಿಸಾಬ್’ ಮಂತ್ರವನ್ನು ಪಾಲಿಸುತ್ತದೆ. ಅಂದರೆ, ಲೂಟಿಕೋರರು ಹಾಗೂ ದಬ್ಬಾಳಿಕೆದಾರರ ಕಟಕಟೆಯಲ್ಲಿ ನಿಲ್ಲಿಸಲಾಗುವುದು ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿರುವ ಮತುವಾ, ನಮಸುದ್ರ ಹಾಗೂ ಎಲ್ಲಾ ನಿರಾಶ್ರಿತ ಸಮುದಾಯಗಳಿಗೆ ಗ್ಯಾರಂಟಿ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ. ಟಿಎಂಸಿಯ ಯಾವುದೇ ನಾಯಕನ ಕೃಪೆಯಿಂದ ನೀವು ಇಲ್ಲಿ ಇಲ್ಲ. ಸಂವಿಧಾನದ ರಕ್ಷಣೆಯಿಂದ ನೀವು ಇಲ್ಲಿ ಇದ್ದೀರಿ ಎಂದು ಹೇಳಿದ್ದಾರೆ.
ಈ ಸಮುದಾಯಗಳ ರಕ್ಷಣೆಗೆ, ನಿರಾಶ್ರಿತರಿಗೆ ಪೌರತ್ವ ಕಲ್ಪಿಸಲು ಸಿಎಎ ಕಾನೂನು ತರಲಾಗಿದೆ. ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಕೂಡಲೇ ನಿರಾಶ್ರಿತರಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡುವ ಕೆಲಸ ಮಾಡಲಾಗುವುದು ಎಂದರು.
ಒಳ ನುಸುಳುಕೋರರು ಗಂಟು ಕಟ್ಟಿ:
ಆರೋಪಿತ ಕಾನೂನು ಬಾಹಿರ ನಿರಾಶ್ರಿತರ ವಿರುದ್ಧ ಕಿಡಿಕಾರಿದ ಮೋದಿ, ‘ಬಿಜೆಪಿ ಸರ್ಕಾರ ಬಂಗಾಳವನ್ನು ಮತ್ತೊಂದು ದೊಡ್ಡ ಸಮಸ್ಯೆಯಿಂದ ಮುಕ್ತಿಗೊಳಿಸಲಿದೆ. ಭಾರತಕ್ಕೆ ಒಳನುಸುಳಿದವರನ್ನು ಹೊರದಬ್ಬಲಾಗುವುದು. ಟಿಎಂಸಿಯ 15 ವರ್ಷಗಳ ಆಡಳಿತದಲ್ಲಿ ಬಂಗಾಳದ ಪ್ರತಿಯೊಬ್ಬ ನಾಗರಿಕರು, ಪ್ರತಿಯೊಂದು ಕುಟುಂಬಕ್ಕೂ ಭಯವನ್ನು ಮಾತ್ರ ನೀಡಿದೆ. ಈ ಚುನಾವಣೆ ಟಿಎಂಸಿಯ ಭಯವನ್ನು ಹೋಗಲಾಡಿಸಲೆಂದೇ ಈ ಚುನಾವಣೆ ನಡೆಯುತ್ತಿದೆ ಎಂದು ಹೇಳಿದರು.
‘ನಿಮಗೆ ಸೇರಿದ ಎಲ್ಲಾ ವಸ್ತುಗಳನ್ನು ಗಂಟು ಕಟ್ಟಿ ಎಂದು ನಾನು ನುಸುಳುಕೋರರಿಗೆ ಹೇಳುತ್ತೇನೆ. ನೀವು ನಿರ್ಗಮಿಸುವ ಸಮಯ ಬಂದಿದೆ’ ಎಂದು ಹೇಳಿದರು. ಈ ವೇಳೆ ಜನರಿಂದ ಹರ್ಷೋದ್ಗಾರ ಮೊಳಗಿತು. ನುಸುಳುಕೋರರಿಗೆ ಆಶ್ರಯ ನೀಡಿದವರೂ ಪರಿಣಾಮ ಎದುರಿಸಲಿದ್ದಾರೆ ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.











































