ವಿಶ್ವಸಂಸ್ಥೆ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆಯಲ್ಲಿ ಭಾರತವು ಕಟುವಾಗಿ ಟೀಕಿಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಸೋಮವಾರ ‘ಅಫ್ಘಾನಿಸ್ತಾನದ ಪರಿಸ್ಥಿತಿ’ ಕುರಿತು ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ ಅವರು, ಪಾಕಿಸ್ತಾನದ ವಿರುದ್ಧ ತೀಕ್ಷ್ಯವಾಗ್ದಾಳಿ ನಡೆಸಿದ್ದಾರೆ.’ಅಫ್ಘಾನಿಸ್ತಾನದ ವಿರುದ್ದ ಪಾಕಿಸ್ತಾನ ನಡೆಸುತ್ತಿರುವ ವೈಮಾನಿಕ ದಾಳಿಯಿಂದ ಭಾರಿ ಪ್ರಮಾಣದಲ್ಲಿ ನಾಗರಿಕರ ಸಾವು-ನೋವುಗಳಿಗೆ ಕಾರಣವಾಗುತ್ತಿದ್ದು, ಅಪ್ಸನ್ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಇಂತಹ ವಿವೇಚನಾರಹಿತ ಹಿಂಸಾಚಾರದ ಕೃತ್ಯಗಳು ಅಫ್ಘಾನಿಸ್ತಾನದ ಸಾರ್ವಭೌಮತ್ವದ ಮೇಲಿನ ಬಹಿರಂಗ ದಾಳಿಯಾಗಿದ್ದು, ಈ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆಯುಂಟು ಮಾಡಲಿವೆ’ ಎಂದು ಪರ್ವತನೇನಿ ಹೇಳಿದ್ದಾರೆ.ಯುಎನ್ಎಎಂಎ ಮಾಹಿತಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಈ ವರ್ಷದ ಮೊದಲ ಮೂರು ತಿಂಗಳಲ್ಲೇ ಪಾಕಿಸ್ತಾನದ ದಾಳಿಗೆ 372 ನಾಗರಿಕರು ಸಾವಿಗೀಡಾಗಿದ್ದಾರೆ ಮತ್ತು 397 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಪವಿತ್ರ ರಂಜಾನ್ ಮಾಸದಲ್ಲಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.
‘ಯಾವ ಧರ್ಮ, ಯಾವ ಕಾನೂನು ಮತ್ತು ಯಾವ ನೈತಿಕತೆಯೂ ಇಂತಹ ಕ್ರಮಗಳನ್ನು ಸಮರ್ಥಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.’ನರಮೇಧವನ್ನು ಸೇನಾ ಕಾರ್ಯಾಚರಣೆ ಎಂದು ಬಿಂಬಿಸುವುದರಿಂದ ಅಪರಾಧಿಯು ಅಪರಾಧ ಮುಕ್ತನಾಗುವುದಿಲ್ಲ. ನಾಗರಿಕರನ್ನು ಕೊಲ್ಲುವುದು, ಅಂಗವಿಕಲರನ್ನಾಗಿ ಮಾಡುವುದು ಮತ್ತು ಅವರನ್ನು ಅನಾಥರನ್ನಾಗಿ ಮಾಡುವುದು ಭಯೋತ್ಪಾದನೆ ವಿರುದ್ಧದ ಕ್ರಮವಲ್ಲ’ ಎಂದು ಹೇಳಿದ್ದಾರೆ.ಮುಂದುವರಿದು, ‘ತನ್ನದೇ ವೈಫಲ್ಯಗಳಿಗೆ ನೆರೆಹೊರೆಯವರನ್ನು ದೂಷಿಸುವುದು ಪಾಕಿಸ್ತಾನದ ಹಳೆಯ ಅಭ್ಯಾಸ. ಜಗತ್ತನ್ನು ವಂಚಿಸುವ ಈ ಪ್ರಯತ್ನ ವಿಫಲವಾಗಲಿದೆ’ ಎಂದಿದ್ದಾರೆ.












































