ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ)ವಿವಿಧೆಡೆ ಬುಧವಾರವೂ ಅಂಗಡಿ – ಮುಂಗಟ್ಟು, ಮಾರುಕಟ್ಟೆಗಳನ್ನು ಬಂದ್ ಮಾಡಿ ಜನರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಭದ್ರತಾ ಪಡೆಗಳು ಪಿಒಕೆಯಲ್ಲಿ ನಡೆಸಿದ ನಾಗರಿಕರ ಹತ್ಯೆ ಖಂಡಿಸಿ ಜಂಟಿ ಅವಾಮಿ ಕ್ರಿಯಾ ಸಮಿತಿಯು (ಜೆಎಎಸಿ) ಪ್ರತಿಭಟನೆಗೆ ಮಂಗಳವಾರ ಕರೆ ನೀಡಿತ್ತು. ಜೆಎಎಸಿ ಕರೆಗೆ ಸಾರ್ವಜನಿಕರೂ ಬೆಂಬಲ ವ್ಯಕ್ತಪಡಿಸಿ, ಬಂದ್ಗೆ ಸಹಕಾರ ನೀಡಿದ್ದಾರೆ.ಪಿಒಕೆಯ ವಿವಿಧ ಭಾಗಗಳಲ್ಲಿ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುವಂಥಾಗಿದ್ದು, ವಾಹನಗಳ ಸಂಚಾರವೂ ವಿರಳವಾಗಿ ಕಂಡು ಬಂದಿದೆ ಎಂದು ಬಿಬಿಸಿ ಮತ್ತು ಡಾನ್ ಪತ್ರಿಕೆಗಳು ವರದಿ ಮಾಡಿವೆ.
ಜೆಎಎಸಿಯ ಸುಮಾರು 2000 ಮಂದಿ ಪ್ರತಿಭಟನಕಾರರು ಭಿಂಬರ್ನಿಂದ ಮೀರ್ಪುರ ಮಾರ್ಗವಾಗಿ ಮುಜಾಫರಾಬಾದ್ಗೆ ಪ್ರತಿಭಟನಾ ಜಾಥ ನಡೆಸುತ್ತಿದ್ದು, ಪ್ರತಿಭಟನಾ ಮಾರ್ಗ ಮತ್ತು ಇತರ ಪ್ರದೇಶಗಳಲ್ಲಿ ಗಸ್ತಿಗಾಗಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಆದಾಗ್ಯೂ, ಮಿರ್ಪುರದ ಖಾಯಿದ್ -ಎ- ಆಜಾಂ ಕ್ರೀಡಾಂಗಣದಲ್ಲಿ ನೂರಾರು ಮಂದಿ ಜಮಾಯಿಸಿ, ಪ್ರತಿಭಟನೆ ನಡೆಸಿದ್ದಾರೆ ಎಂದೂ ವರದಿಯಾಗಿದೆ.
ವಕೀಲ ಸಮುದಾಯದ ಬೆಂಬಲ: ಜೆಎಎಸಿಯ ಪ್ರಮುಖಸದಸ್ಯರಾದ ಹಿರಿಯ ವಕೀಲ ಅಮ್ಮದ್ ಅಲಿ ಖಾನ್ ಅವರ ಬಂಧನ ಖಂಡಿಸಿ ಪಿಒಕೆ ಬಾರ್ ಕೌನ್ಸಿಲ್ ಕೂಡ ಪ್ರತಿಭಟನೆಗೆ ಕರೆ ನೀಡಿದೆ. ಈ ಕಾರಣ ವಕೀಲ ಸಮುದಾಯವೂ ಕೂಡ ನ್ಯಾಯಾಲಯದ ಕಲಾಪಗಳನ್ನು ಬುಧವಾರ ಬಹಿಷ್ಕರಿಸಿದೆ.
ಜೆಎಎಸಿ ನಾಯಕರ ಸುಳಿವಿಗೆ ಬಹುಮಾನ: ಜೆಎಎಸಿ ಪ್ರಮುಖನಾಯಕರಾದ ಶೌಕಾತ್ ನವಾಜ್ ಮಿರ್, ಒಮರ್ ನಾಜಿರ್ ಕಾಶ್ಮೀರಿ ಹಾಗೂ ಸರ್ದಾರ್ ಅಮನ್, ಖವಾಜಾ ಮೆಹ್ರನ್ ಸೇರಿದಂತೆ ಇತರೆ ನಾಯಕರ ಬಂಧನಕ್ಕೆ ನೆರವಾಗುವ ಸುಳಿವು ನೀಡುವವರಿಗೆ ಒಂದು ಕೋಟಿ ರೂ (ಪಾಕಿಸ್ತಾನ ರೂಪಾಯಿ) ಬಹುಮಾನ ನೀಡುವುದಾಗಿ ಪಿಒಕೆ ಆಡಳಿತವು ಘೋಷಣೆ ಮಾಡಿದೆ.












































