ಶಿರಸಿ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಕಡೆಯಿಂದ ಕೊಲ್ಲಾಪುರಕ್ಕೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯ ಮೇಲೆ ತಹಶೀಲ್ದಾರ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಹೆಚ್ಚಿನ ಪ್ರಮಾಣದ ಅಕ್ಕಿಯನ್ನು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ.
ಶಿರಸಿ ತಹಶೀಲ್ದಾರ ಪಟ್ಟರಾಜ ಗೌಡ ಹಾಗೂ ನಗರಠಾಣೆ ಪಿಎಸ್ಐ ನರಸಿಂಹಲು ನೇತೃತ್ವದಲ್ಲಿ ಅಧಿಕಾರಿಗಳ ತಂಡವು ದಿಢೀರ್ ದಾಳಿ ನಡೆಸಿದ್ದು, ಸಿದ್ದಾಪುರ ಕಡೆಯಿಂದ ಕೊಲ್ಲಾಪುರಕ್ಕೆ ತೆರಳುತ್ತಿದ್ದ ವಾಹನವನ್ನು ನಗರದ ನಿಲೇಕಣಿ ತಡೆದು ತಪಾಸಣೆ ನಡೆಸಿದೆ. ಈ ವೇಳೆ ಲಾರಿಯಲ್ಲಿದ್ದ ಪಡಿತರ ಯೋಜನೆಯ 473 ಚೀಲ (ತಲಾ 50 ಕೆಜಿ ಚೀಲ) ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಿದ್ದ 10 ಚಕ್ರದ ಲಾರಿ, ಚಾಲಕನ್ನು ಅಧಿಕಾರಿಗಳು ವಶಕ್ಕೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.















































