
ಪುತ್ತೂರಿನ ಬೊಳುವಾರಿನಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಸೇರಿರುವ ಜಾಗದ ವಿಚಾರವಾಗಿ ನಿನ್ನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವಾಲಯಗಳ ವ್ಯವಸ್ಥಾಪನ ಮಂಡಳಿಗಳ ಸಭೆ ನಡೆದಿದ್ದು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಕೂಡ ಭಾಗವಹಿಸಿದ್ದರೆಂದು ತಿಳಿದು ಬಂದಿದೆ.

ಎರಡು ಸಮಿತಿಯವರು ಜಂಟಿಯಾಗಿ ಕುಕ್ಕೆ ದೇವಾಲಯದ ಬೊಳುವಾರಿನಲ್ಲಿರುವ ಸ್ಥಳವನ್ನು ಪರಿಶೀಲನೆ ಮಾಡಿದ್ದು ಈಗ ಅಲ್ಲಿ ಅನಧಿಕೃತವಾಗಿ ನೆಲೆಸಿರುವ ಕುಟುಂಬಗಳಿಗೆ ಪರಿಹಾರವನ್ನು ನೀಡಿ ಒಕ್ಕಲೆಬ್ಬಿಸಿ ಅಲ್ಲಿ ವ್ಯವಹಾರ ಮಳಿಗೆಗಳನ್ನು ನಿರ್ಮಿಸುವುದು ಎಂದು ನಿರ್ಣಯಿಸಲಾಗಿದೆ ಎಂದು ತಿಳಿದು ಬಂದಿದೆ.

ಇದು ಸುಮಾರು 25 ಕೋಟಿಗೂ ಅಧಿಕ ಮೌಲ್ಯವಿರುವ 1.57 ಎಕ್ರೆ ಪುತ್ತೂರಿನ ಹೃದಯ ಭಾಗ ಬೊಳುವಾರಿನಲ್ಲಿರುವ ಆಸ್ತಿಯಾಗಿದ್ದು 2 ವರುಷಗಳ ಹಿಂದೆ ಆವಾಗಿನ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನ ಸಮಿತಿ ಮೋಹನ್ ರಾಮ್ ಸುಳ್ಳಿ ಇವರ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಮೂಲಕ ಒತ್ತುವರಿ ಮಾಡಲಾಗಿತ್ತು .ಈಗ ಈ ಜಾಗವನ್ನು ಕುಕ್ಕೆ ದೇವಾಲಯದ ಒಡೆತನದಿಂದ ಬೇರೆಯವರಿಗೆ ನೀಡಬೇಕೆಂಬ ಒತ್ತಡವಿದೆಯೆಂದು ವದಂತಿಗಳು ಕೇಳಿ ಬಂದಿದೆ.

ಈಗೀನ ವ್ಯವಸ್ಥಾಪನಾ ಸಮಿತಿಯು ಇದಕ್ಕೆ ಭಾಗಶಃ ಒಪ್ಪಿಕೊಂಡಿದ್ದರೆಂದು ಸುದ್ದಿಯಿದೆ. ಆದರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಜಾಗವು ಯಾರ ಪಿತ್ರಾರ್ಜಿತ ಸೊತ್ತಲ್ಲ ಅದು ದೇವರ ಆಸ್ತಿ ಎಂದು ತಿಳಿದುಕೊಂಡು ಆಡಳಿತ ನಡೆಸಬೇಕು ಮತ್ತು ಯಾವುದೇ ಕಾರಣಕ್ಕೂ ಸುಬ್ರಹ್ಮಣ್ಯ ದೇವಾಲಯ ಬಿಟ್ಟು ಬೇರೆ ಯಾರಿಗೂ ಪರಬಾರೆ ಮಾಡಬಾರದು ಎಂದು ಸುಬ್ರಹ್ಮಣ್ಯನ ಭಕ್ತರು ಆಗ್ರಹಿಸುತ್ತಿದ್ದರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದ್ದು ಸುಳ್ಯ ಕ್ಷೇತ್ರಕ್ಕೆ ಒಳಪಡುವ ಈ ದೇವಾಲಯ ವಿಚಾರದಲ್ಲಿ ಸ್ಥಳೀಯ ಶಾಸಕಿ ಭಾಗೀರಥಿ ಮುರುಳ್ಯ ರನ್ನು ಕಡೆಗಣಿಸಿದ್ದಾರೆಂದು ಆರೋಪ ಕೂಡ ಕೇಳಿ ಬರುತ್ತಿದೆ. ಈ ಬಗ್ಗೆ ದೊಡ್ಡ ಮಟ್ಟದ ಹೋರಾಟ ದ ಬಗ್ಗೆ ಚಿಂತಿಸಲಾಗಿದೆ ಯೆಂದು ತಿಳಿದುಬಂದಿದೆ.













































