ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ರಿಯಲ್ ಎಸ್ಟೇಟ್ ದೊರೆ: ಕುಮಾರಸ್ವಾಮಿ ಆರೋಪ

Picture of Savistara

Savistara

Bureau Report

ಮಂಡ್ಯ: ‘ಬಿಡದಿ ಟೌನ್‌ಶಿಪ್ ಸರ್ಕಾರದ ರಿಯಲ್ ಎಸ್ಟೇಟ್ ಆಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ದೊರೆ. 1999ರಲ್ಲಿ ಮೂರು ಎಕರೆ ಇದ್ದ ಪಿತ್ರಾರ್ಜಿತ ಆಸ್ತಿ, 2018ರಲ್ಲಿ ₹1400 ಕೋಟಿ ಮೌಲ್ಯದ ಆಸ್ತಿ ಹೇಗಾಯ್ತು? ಜನರಿಗೂ ಇದರ ಬಗ್ಗೆ ತರಬೇತಿ ಕೊಡಲಿ. ಸಣ್ಣ ಹಿಡುವಳಿದಾರರು ಅವರಂತೆ ಶ್ರೀಮಂತರಾಗಲಿ’ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಗಿ ಟೀಕಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ನೇರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವೇ ಜನರ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ನೇರವಾಗಿ ಮುಖ್ಯಮಂತ್ರಿಗಳೇ ರಿಯಲ್ ಎಸ್ಟೇಟ್ ಮಾಫಿಯಾ ದೊರೆಗಳ ಜೊತೆ ಕೈ ಜೋಡಿಸಿ ಈ ದಂಧೆ ನಡೆಸುತ್ತಿದ್ದಾರೆ. ಬಹುಪಾಲು ರೈತರು ಭೂಮಿ ಕೊಡಲು ತಯಾರಿಲ್ಲ. ಪೊಲೀಸರು ಮತ್ತು ರೌಡಿಗಳನ್ನು ಬಿಟ್ಟು ರೈತರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರವೇ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ’ ಎಂದು ಗಂಭೀರ ಆರೋಪ ಮಾಡಿದರು.’ಬಿಡದಿ ಟೌನ್‌ಶಿಪ್‌ಗೆ ಪ್ರಧಾನಿ ನರೇಂದ್ರ ಮೋದಿ ‘ಗ್ರೀನ್ ಸಿಗ್ನಲ್’ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಮೋದಿ ಅವರು ಗುಜರಾತ್‌ನಲ್ಲಿ ಬರಡು ಭೂಮಿಯಲ್ಲಿ ಟೌನ್‌ಶಿಪ್ ಮಾಡಿದ್ದಾರೆ. ಡಿಕೆಶಿ ಅವರು ಮಾಡುತ್ತಿರುವ ಜಾಗದಲ್ಲಿ ಲಕ್ಷಾಂತರ ತೆಂಗು, ಅಡಿಕೆ ಬೆಳೆ ಬೆಳೆಯುತ್ತಾರೆ. ಉಪಯೋಗಕ್ಕೆ ಬಾರದ ಜಾಗದಲ್ಲಿ ಟೌನ್‌ಶಿಪ್ ಮಾಡಿದರೆ ನನ್ನ ಅಭ್ಯಂತರವಿಲ್ಲ’ ಎಂದರು.

‘ಹಿಂದೆ ‘ಬಿ.ಎಂ.ಐ.ಸಿ.ಪಿ’ ಎಂಬ ಪ್ರಾಧಿಕಾರ ರಚಿಸಿ, ಅದಕ್ಕೆ ಡಿಕೆಶಿ ಅಧ್ಯಕ್ಷರಾಗಿದ್ದರು. ಬೆಂಗಳೂರು- ಮೈಸೂರು ರಸ್ತೆಯಲ್ಲಿ 1.75 ಲಕ್ಷ ಎಕರೆ ಭೂಮಿಯನ್ನು ರಸ್ತೆಗೆ ಮತ್ತು ಟೌನ್‌ಶಿಪ್ ಮಾಡಲು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದರು. ಕಳೆದ 30 ವರ್ಷಗಳಲ್ಲಿ ಏನಾಯ್ತು ಆ ಪ್ರಾಜೆಕ್ಟ್’ ಎಂದು ಪ್ರಶ್ನಿಸಿದರು.

‘ಎಚ್‌ಡಿಕೆ ಕೂಸು’ ಅಂತ ಹೇಳಿಕೊಂಡು ಬಿಡದಿ ಟೌನ್‌ಶಿಪ್ ಮಾಡಲು ತರಾತುರಿಯಲ್ಲಿ ಹೊರಟಿದ್ದಾರೆ. ಅಂದು ಇದೇ ಕಾಂಗ್ರೆಸ್ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ‘ಸತ್ಯಶೋಧನಾ ಸಮಿತಿ’ ಮಾಡಿಕೊಂಡಿದ್ದರು. ಕುಮಾರಸ್ವಾಮಿ ಬೆಂಗಳೂರು ಸುತ್ತಮುತ್ತ ರೈತರ ಭೂಮಿ ಕಬಳಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದರು. ರೈತರೊಂದಿಗೆ ಮೂರು ಬಾರಿ ಚರ್ಚಿಸಿ, ಅವರ ಭಾವನೆಗಳಿಗೆ ಸ್ಪಂದಿಸಿ ಯೋಜನೆ ಕೈಬಿಟ್ಟೆ’ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.’ನಾನು ರಾಜಕೀಯಕ್ಕೆ ಬರುವ ಮುನ್ನ ಮೈಸೂರಲ್ಲಿ ಹಂಚಿಕೆದಾರನಾಗಿ ಕೆಲಸ ಮಾಡಿದ್ದೆ. ಅಲ್ಲಿ ಸಂಪಾದನೆ ಮಾಡಿದ ಹಣದಲ್ಲಿ ಜಮೀನು ಖರೀದಿಸಿದ್ದೇನೆ. ಯಾರನ್ನೋ ಅಪಹರಿಸಿ ಸಂಪಾದನೆ ಮಾಡಿದ ಭೂಮಿಯಲ್ಲ. ಆಣೆ, ಪ್ರಮಾಣಕ್ಕೆ ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ದೇವರ ಭಕ್ತಿಯನ್ನು ಅವರಿಂದ ಕಲಿಯಬೇಕಿಲ್ಲ’ ಎಂದು ತಿರುಗೇಟು ನೀಡಿದರು.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!