
ಮಂಗಳೂರು: ರೈಲ್ವೇಹಳಿಗೆ ಬಂಡೆಗಳು ಬಿದ್ದು ಅಡಚಣೆ;5 ಗಂಟೆಗಳ ಬಳಿಕ ಸಂಚಾರ ಪುನರಾರಂಭ
ರೈಲ್ವೇ ಹಳಿ ಮೇಲೆ ಬಿದ್ದಿರುವ ಬಂಡೆಗಳು
ಸಕಲೇಶಪುರ: ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ರೈಲ್ವೇ ಹಳಿ ಮೇಲೆ ಬಿದ್ದಿದ್ದ 3 ಬಂಡೆಗಳನ್ನು ರೈಲ್ವೆ ಇಲಾಖೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದು, ರೈಲು ಸಂಚಾರ ಪುನರಾರಂಭವಾಗಿದೆ.
ಮೊದಲು ಗುಡ್ಡ ಕುಸಿತದಿಂದ ಘಟನೆ ನಡೆದಿದೆ ಎಂದು ಭಾವಿಸಲಾಗಿತ್ತು. ಆದರೆ ರೈಲ್ವೆ ವ್ಯಾಗನ್ ನಲ್ಲಿ ಸಾಗಿಸುತ್ತಿದ್ದ ಬಂಡೆಗಳು ಉರುಳಿದ್ದರಿಂದ ಸಮಸ್ಯೆ ಆಗಿತ್ತು ಎಂದು ರೈಲ್ವೆ ಇಲಾಖೆ ತಿಳಿಸಿದೆ.


ಇಂದು (ಜೂ.21ರ, ಶನಿವಾರ) ಬೆಳಿಗ್ಗೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ರೈಲ್ವೆ ಕಾರ್ಯಾಚರಣೆಗೆ ಬಳಸಲು ವ್ಯಾಗನ್ನಲ್ಲಿ ಬಂಡೆಗಳನ್ನು ಹೊತ್ತೊಯ್ಯುತ್ತಿದ್ದಾಗ, ಕೆಲ ಬಂಡೆಗಳು ಆಯತಪ್ಪಿ ರೈಲ್ವೇ ಹಳಿಯ ಮೇಲೆ ಬಿದ್ದಿದ್ದವು.

ಇದರಿಂದ ಸಕಲೇಶಪುರದಲ್ಲಿ ಬೆಂಗಳೂರು-ಮುರುಡೇಶ್ವರ ಎಕ್ಸ್ಪ್ರೆಸ್ ಹಾಗೂ ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲುಗಳು ಮತ್ತು ಯಡಕುಮೆರಿಯಲ್ಲಿ ವಿಜಯಪುರ-ಮಂಗಳೂರು ಸೆಂಟ್ರಲ್ ರೈಲು ನಿಂತಿದ್ದವು.

ರೈಲ್ವೆ ಸಿಬ್ಬಂದಿ ಸುಮಾರು 5 ಗಂಟೆಗಳ ಕಾಲ ಶ್ರಮಿಸಿ ಬಂಡೆಗಳನ್ನು ತೆರವುಗೊಳಿಸಿದ್ದಾರೆ.
ಈ ಅವಧಿಯಲ್ಲಿ ಪ್ರಯಾಣಿಕರು ರೈಲಿನಲ್ಲಿ ಕಾಲ ಕಳೆಯಬೇಕಾಯಿತು. ಪ್ರಸ್ತುತ ಎಲ್ಲಾ 3 ರೈಲುಗಳ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಮುಂಜಾನೆ 5 ಗಂಟೆಗೆ ಹಳಿಗಳ ಮೇಲೆ ಬಂಡೆ ಬಿದ್ದು ಸ್ವಲ್ಪ ಸಮಯ ವ್ಯತ್ಯಯ ಉಂಟಾಗಿತ್ತು, ಇದೀಗ ಸಂಚಾರ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉಪಹಾರ ವ್ಯವಸ್ಥೆ,ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.













































