ರೈತರಿಗೆ ಡಿಸಿಸಿ ಬ್ಯಾಂಕ್ ಅನ್ಯಾಯ: ಭಗವಂತ ಖೂಬಾ

Picture of Savistara

Savistara

Bureau Report

ಬೀದರ್‌: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ವತಿಯಿಂದ ರೈತರಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದು, ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು.ನಾನು ಕೇಂದ್ರ ಸಚಿವನಾಗಿದ್ದಾಗ ಜಿಲ್ಲೆಗೆ 600 ಕೋಟಿ ಫಸಲ್ ಬಿಮಾ ಪರಿಹಾರ ಹಣ ತಂದಿದ್ದೆ. ಆದರೆ, 2023-24 ರಲ್ಲಿ 2 ಲಕ್ಷ 1 ಸಾವಿರ ಜನ ನೋಂದಣಿ ಮಾಡಿಸಿದ್ದು ಕೇವಲ 12.60 ಕೋಟಿ ಮಾತ್ರ ಬಂದಿದೆ. ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ 2 ಲಕ್ಷ 4 ಸಾವಿರ ಜನ ನೊಂದಣಿ ಮಾಡಿಸಿದ್ದು 656 ಕೋಟಿ ಫಸಲ ಬಿಮಾ ಪರಿಹಾರ ಹಣ ನೀಡಲಾಗಿದೆ. ಇದು ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾಚಿಕೆ ತರುವ ವಿಷಯ ಎಂದು ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಛೇಡಿಸಿದರು.

ಜಿಲ್ಲೆಯಲ್ಲಿ ಒಂದು ಸಾಚಾ ಕಂಪನಿಯಿದೆ. ಸಚಿವ ಈಶ್ವರ ಖಂಡ್ರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ ಮತ್ತು ಸಂಸದ ಸಾಗರ ಖಂಡ್ರೆ ಅದರ ಸದಸ್ಯರಾಗಿದ್ದಾರೆ. `ಸೌ ಚುಹೆ ಖಾಕೆ ಬಿಲ್ಲಿ ಹಜ್ ಕೋ ಗಯಾ’ ಎನ್ನುವಂತೆ ಈ ಮೂವರ ಹೇಳಿಕೆಗೂ ನಡವಳಿಕೆಗೂ ಸಂಬಂಧವೇ ಇಲ್ಲ. ರೈತರ ಹೆಸರು ಹೇಳಿ ರಾಜಕೀಯ ಮಾಡುವ ಸಚಿವರ ಕುಟುಂಬ ಅವರ ಶೋಷಣೆ ಮಾಡುತ್ತಿದೆ. ಡಿಸಿಸಿ ಬ್ಯಾಂಕ್ ನಿಂದ ವಿಮಾ ಹಣ ಕಟ್ಟುವುದಿಲ್ಲ ಎಂದು ಅಮರ ಖಂಡ್ರೆ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಎಂಜಿಎಸ್‌ಎಸ್‌ಕೆಯಿಂದ ಡಿಸಿಸಿ ಬ್ಯಾಂಕ್‌ಗೆ 478 ಕೋಟಿ ಸಾಲ ಇದೆ. ಈ ಖಂಡ್ರೆ ಕುಟುಂಬದ ರಾಕ್ಷಸ ಪ್ರವೃತ್ತಿ ಆಡಳಿತದಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಇದಕ್ಕೆ ಕೊನೆ ಹಾಕಬೇಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಫಸಲ್ ಬಿಮಾ ನಿರ್ವಹಣೆ ಸರಿಯಿಲ್ಲ. ಪೊಲೀಸ್ ವ್ಯವಸ್ಥೆ ದುರ್ಬಲವಾಗಿದೆ. ಯುವಕರು ಮಾರಕಾಸ್ತ್ರ ಇಟ್ಟಿಕೊಂಡು ಓಡಾಡುತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೋರಾಟಗಾರರ ಮೇಲೆ ಕೇಸ್ ದಾಖಲಾಗುತ್ತಿವೆ. ಎಟಿಎಂ ದರೋಡೆಕೋರರ ಸುಳಿವಿಲ್ಲ. ಅಸಮರ್ಥ ಅಧಿಕಾರಿಗಳ ವರ್ಗಾವಣೆ ಇಲ್ಲ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಹೋರಾಟ ಅನಿವಾರ್ಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರಾಜಶೇಖರ ನಾಗಮೂರ್ತಿ, ಜ್ಞಾನೇಶ್ವರ ಪಾಟೀಲ, ಶ್ರೀನಿವಾಸ ಚೌಧರಿ, ಬಸವರಾಜ ಪವಾರ್, ಶಶಿಧರ ಹೊಸಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

[t4b-ticker]
error: Content is protected !!