‘ಮೋದಿ ಅವರ ಶಕ್ತಿ, ಕ್ರಿಯಾಶೀಲತೆ ಮತ್ತು ಎಲ್ಲದರಲ್ಲೂ ತೊಡಗಿಸಿಕೊಳ್ಳುವ ಅವರ ಸಾಮರ್ಥ್ಯವು ಜಾಗತಿಕ ವೇದಿಕೆಯಲ್ಲಿ ದೇಶದ ಬಹುದೊಡ್ಡ ಆಸ್ತಿಯಾಗಿದೆ. ಆದರೆ ಅದಕ್ಕೆ ಹೆಚ್ಚಿನ ಬೆಂಬಲ ಸಿಗಬೇಕಿದೆ’ ಎಂಬ ತರೂರ್ ಅವರ ಹೇಳಿಕೆಯು ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದರ ಜತೆಗೆ, ಪಕ್ಷದ ಮುಖಂಡರೊಂದಿಗೆ ಅವರು ಹೊಂದಿರುವ ಭಿನ್ನಾಭಿಪ್ರಾಯವನ್ನು ಇನ್ನಷ್ಟು ಹೆಚ್ಚಿಸಿದೆ.
ದೇಶದ ವಿದೇಶಾಂಗ ನೀತಿಗಳ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ಪಕ್ಷವು ನಿರಂತರ ದಾಳಿ ನಡೆಸುತ್ತಿರುವ ಸಂದರ್ಭದಲ್ಲೇ ತರೂರ್ ಅವರು ಮೋದಿ ಅವರನ್ನು ಹೊಗಳಿದ್ದು ಪಕ್ಷಕ್ಕೆ ತೀವ್ರ ಇರಿಸುಮುರಿಸು ಉಂಟುಮಾಡಿದೆ.ಶಶಿ ತರೂರ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ‘ಪ್ರಧಾನಿ ಮೋದಿ ಅವರ ಕ್ರಿಯಾಶೀಲತೆ ಮತ್ತು ಜಾಗತಿಕ ಸಂಪರ್ಕವು ಭಾರತಕ್ಕೆ ರಚನಾತ್ಮಕ ಲಾಭವನ್ನು ತಂದುಕೊಡಬಲ್ಲದು ಎಂಬುದನ್ನು ಶಶಿ ತರೂರ್ ಒಪ್ಪಿಕೊಂಡಿದ್ದಾರೆ.
ಆಮೂಲಕ ರಾಹುಲ್ ಗಾಂಧಿ ಏನೆಂಬುದನ್ನು ತರೂರ್ ತೋರಿಸಿಕೊಟ್ಟಿದ್ದಾರೆ’ ಎಂದಿದ್ದಾರೆ.













































