
ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ
ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸುತ್ತಲೇ ಇರುವ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರನ್ನು ಈ ಬಗ್ಗೆ ಮುಕ್ತವಾಗಿ ಚರ್ಚಿಸಲು ಬರುವಂತೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಆಹ್ವಾನ ನೀಡಿದೆ.
ಚುನಾವಣೆ ಕುರಿತು ರಾಹುಲ್ ಗಾಂಧಿ ಅವರು ಪ್ರಮುಖ ಪತ್ರಿಕೆಯೊಂದಕ್ಕೆ ಬರೆದ ಲೇಖನಕ್ಕೆ ಉತ್ತರವೆಂಬಂತೆ ಇಮೇಲ್ ಮೂಲಕ ಪತ್ರ ರವಾನಿಸಿರುವ ಆಯೋಗ, ದೇಶದಲ್ಲಿನ ಯಾವುದೇ ಚುನಾವಣೆಗಳನ್ನು ಕಾನೂನುಬದ್ಧವಾಗಿಯೇ ನಡೆಸಲಾಗುತ್ತದೆ. ಆದಾಗ್ಯೂ, ತಮಗೆ ಅನುಮಾನ ಮತ್ತು ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳಲು ನೀವೇ ಸಮಯ ಮಾಡಿಕೊಂಡು ಚರ್ಚೆಗೆ ಬನ್ನಿ ಎಂದು ಸೂಚಿಸಿದೆ.
ಚುನಾವಣೆಗಳ ಪಾರದರ್ಶಕತೆ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ನೀಡಲಾಗಿದೆ. ಆದಾಗ್ಯೂ, ನಿಮ್ಮ ಅನುಮಾನಗಳು ಬಗೆಹರಿದಿಲ್ಲ. ನಿಮಗೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಆಯೋಗಕ್ಕೆ ಪತ್ರ ಬರೆಯಬಹುದು ಅಥವಾ ನಮ್ಮೊಂದಿಗೆ ಸಭೆ, ಸಂವಾದ ನಡೆಸಲು ತಾವೇ ಖುದ್ದಾಗಿ ಬಿಡುವು ಮಾಡಿಕೊಂಡು ಮಾತುಕತೆಗೆ ಬರಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.













































