ಬಡವರು, ಮಧ್ಯಮ ವರ್ಗಕ್ಕೆ ಗುಡ್​ ನ್ಯೂಸ್​: ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತಕ್ಕೆ ಚಿಂತನೆ; ಒಂದೊಮ್ಮೆ ಕಡಿಮೆ ಮಾಡಿದರೆ ಈ ಎಲ್ಲ ವಸ್ತುಗಳ ಬೆಲೆ ಇಳಿಕೆ!

Picture of Savistara

Savistara

Bureau Report

ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳು ಬಳಸುವ ಅನೇಕ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡಲು ಕೇಂದ್ರವು ಯೋಜಿಸಿದೆ

ನವದೆಹಲಿ: ಜಿಎಸ್‌ಟಿ ಸಂಗ್ರಹವು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಈ ನಡುವೆ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಐದು ವರ್ಷಗಳ ಹಿಂದೆ ವರ್ಷಕ್ಕೆ 11 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಜಿಎಸ್‌ಟಿ ಸಂಗ್ರಹವು ಈಗ 22 ಲಕ್ಷ ಕೋಟಿ ರೂ.ಗೆ ದ್ವಿಗುಣಗೊಂಡಿದೆ. ಈ ಸಂದರ್ಭದಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಪರಿಹಾರ ನೀಡುವ ನಿರ್ಧಾರವನ್ನು ಕೇಂದ್ರವು ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಶೀಘ್ರವೇ ಬರಲಿದೆಯಾ ಶುಭ ಸಮಾಚಾರ:

ಈ ವರ್ಷದ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ ಮಧ್ಯಮ ವರ್ಗಕ್ಕೆ ಪರಿಹಾರ ಒದಗಿಸಿರುವ ಕೇಂದ್ರ ಸರ್ಕಾರ ಇಂತಹುದೇ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳು ಬಳಸುವ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲು ಯೋಜಿಸಿದೆ. ಪ್ರಸ್ತುತ ಶೇಕಡಾ 12 ರಷ್ಟು ಜಿಎಸ್‌ಟಿ ಸ್ಲ್ಯಾಬ್ ಸಂಪೂರ್ಣವಾಗಿ ತೆಗೆದುಹಾಕಲು ಅಥವಾ ಶೇಕಡಾ 12 ರಷ್ಟು ತೆರಿಗೆ ಸ್ಲ್ಯಾಬ್‌ನಲ್ಲಿರುವ ಹೆಚ್ಚಿನ ವಸ್ತುಗಳನ್ನು ಶೇಕಡಾ 5 ರಷ್ಟು ತೆರಿಗೆ ಸ್ಲ್ಯಾಬ್‌ ಅಡಿಯಲ್ಲಿ ತರಲು ಕೇಂದ್ರವು ಯೋಜಿಸುತ್ತಿದೆ. ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಆಶಯವನ್ನು ಇದು ಹೊಂದಿದೆ.

ಇಂತಹದ್ದೊಂದು ನಿರ್ಧಾರ ತೆಗೆದುಕೊಂಡರೆ ಈ ಎಲ್ಲ ವಸ್ತುಗಳ ಬೆಲೆ ಇಳಿಕೆ:

ಟೂತ್‌ಪೇಸ್ಟ್, ಟೂತ್ ಪೌಡರ್, ಛತ್ರಿಗಳು, ಹೊಲಿಗೆ ಯಂತ್ರಗಳು, ಪ್ರೆಶರ್ ಕುಕ್ಕರ್‌ಗಳು, ಅಡುಗೆ ಪಾತ್ರೆಗಳು, ಗೀಸರ್‌ಗಳು, ಕಡಿಮೆ ಸಾಮರ್ಥ್ಯದ ತೊಳೆಯುವ ಯಂತ್ರಗಳು, ಸೈಕಲ್‌ಗಳು, 1,000 ರೂ.ಗಿಂತ ಹೆಚ್ಚಿನ ಮೌಲ್ಯದ ಸಿದ್ಧ ಉಡುಪುಗಳು, ಪಾದರಕ್ಷೆಗಳು, ಸ್ಟೇಷನರಿ ವಸ್ತುಗಳು, ಲಸಿಕೆಗಳು, ಸೆರಾಮಿಕ್ ಟೈಲ್ಸ್ ಮತ್ತು ಕೃಷಿ ಉಪಕರಣಗಳು ಜಿಎಸ್‌ಟಿ ಕಡಿತಗೊಳ್ಳುವ ನಿರೀಕ್ಷೆಯಿರುವ ವಸ್ತುಗಳಲ್ಲಿ ಸೇರಿವೆ. ಪ್ರಸ್ತಾವಿತ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತಗೊಂಡರೆ, ಅವು ಬಡವರು ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಗೆ ಸಿಗಲಿವೆ.

ಖಜಾನೆಯ ಮೇಲೆ ಬೀಳಲಿದೆ ಹೊರೆ:

ಕೇಂದ್ರವು ತೆಗೆದುಕೊಳ್ಳಲಿರುವ ಈ ನಿರ್ಧಾರವು ಖಜಾನೆಯ ಮೇಲೆ ಸುಮಾರು 50,000 ಕೋಟಿ ರೂ.ಗಳವರೆಗೆ ಹೊರೆ ಬೀಳುವ ನಿರೀಕ್ಷೆಯಿದೆ. ಆದಾಗ್ಯೂ, ಈ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವುದರಿಂದ ಬಳಕೆ ಹೆಚ್ಚಾಗುತ್ತದೆ. ಆರ್ಥಿಕತೆಗೆ ಇದು ಹೆಚ್ಚಿನ ನೆರವು ನೀಡುವ ಸಾಧ್ಯತೆಗಳಿವೆ. ದೀರ್ಘಾವಧಿಯಲ್ಲಿ ಜಿಎಸ್‌ಟಿ ಸಂಗ್ರಹ ಹೆಚ್ಚಾಗುತ್ತದೆ ಎಂಬುದು ಸರ್ಕಾರದ ಯೋಚನೆಯಾಗಿದೆ.

ಕೆಳ ಮತ್ತು ಮಧ್ಯಮ ವರ್ಗಕ್ಕೆ ಪರಿಹಾರ ಒದಗಿಸಲು ಜಿಎಸ್‌ಟಿ ದರಗಳನ್ನು ತರ್ಕಬದ್ಧಗೊಳಿಸಲು ಉದ್ದೇಶಿಸಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದು ಗಮನಾರ್ಹ. ಈ ನಿರ್ಧಾರಗಳನ್ನು ತೆಗೆದುಕೊಳ್ಳಲು, ಜಿಎಸ್‌ಟಿ ಮಂಡಳಿಯಲ್ಲಿ ಒಮ್ಮತವನ್ನು ಸಾಧಿಸಬೇಕಾಗುತ್ತದೆ. ಈ ತಿಂಗಳು ಜಿಎಸ್‌ಟಿ ಮಂಡಳಿ ಸಭೆ ನಡೆಯುವ ಸಾಧ್ಯತೆ ಇದೆ.

[t4b-ticker]
error: Content is protected !!