ದ.ಕ.ದಲ್ಲಿ 25 ಸಾವಿರ ಉದ್ಯೋಗ ಸೃಷ್ಟಿ ಗುರಿ

Picture of Savistara

Savistara

Bureau Report

ಮಂಗಳೂರು: ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಮೂಲಕ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಉದ್ಯೋಗ ಪ್ರೋತ್ಸಾಹಧನ(ಎಂಪ್ಲಾಯ್ ಮೆಂಟ್ ಲಿಂಕ್ಸ್ ಇನ್ಸೆಂಟಿವ್-ಇಎಲ್‌ಐ) ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20ರಿಂದ 25 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ ಎಂದು ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ) ಪ್ರಾದೇಶಿಕ ಆಯುಕ್ತ ರಾಜೀಬ್‌ ಮುಖರ್ಜಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ ಪ್ರಸ್ತಾವಿತ ಯೋಜನೆಯಲ್ಲಿ 2,500ರಿಂದ 3000 ಸಂಸ್ಥೆಗಳನ್ನು ನೋಂದಣಿ ಮಾಡಿಕೊಳ್ಳುವ ಗುರಿ ಇರಿಸಲಾಗಿದ್ದು, ಈ ಬಗ್ಗೆ ಉದ್ಯೋಗದಾತರು ಹಾಗೂ ನೌಕರರಲ್ಲಿ ಜಾಗೃತಿ ಮೂಡಿಸಲು ಪ್ರಾದೇಶಿಕ ಕಚೇರಿಯಿಂದ ವಿವಿಧೆಡೆ ಶಿಬಿರ ಆಯೋಜಿಸಲಾಗುವುದು ಎಂದು ನಗರದ ಪ್ರಾದೇಶಿಕ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇಎಲ್‌ಐ ಯೋಜನೆಯಡಿ ಉದ್ಯೋಗಕ್ಕೆ ಮೊದಲ ಬಾರಿ ಸೇರುವವರಿಗೆ ಒಂದು ತಿಂಗಳ ವೇತನ(ವಾರ್ಷಿಕ ತಲಾ 15 ಸಾವಿರ ರೂ. 2 ಕಂತು) ದೊರೆಯುತ್ತದೆ. ಜತೆಗೆ ಉದ್ಯೋಗದಾತರಿಗೆ ಒಂದು ಅಥವಾ ಎರಡು ವರ್ಷಗಳ ಅವಧಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು. 2024-25ರ ಕೇಂದ್ರ ಬಜೆಟ್‌ನಲ್ಲಿ ಯೋಜನೆ ಘೋಷಣೆಯಾಗಿದ್ದು, ಅ.1ರಿಂದ ಕಾರ್ಯಾರಂಭವಾಗಲಿದೆ. ದೇಶದ 4.1 ಕೋಟಿ ಯುವಕರಿಗೆ ಉದ್ಯೋಗವಕಾಶ ಸೃಷ್ಟಿಸುವ ಈ ಪ್ಯಾಕೇಜ್‌ಗಾಗಿ 2 ಲಕ್ಷ ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಇದರಲ್ಲಿ 99,446 ಕೋಟಿ ರೂ. ವೆಚ್ಚದೊಂದಿಗೆ 2 ವರ್ಷಗಳಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು. ಗರಿಷ್ಠ 1 ಲಕ್ಷ ರೂ. ತನಕದ ವೇತನ ಹೊಂದಿರುವ ನೌಕರರು ಅರ್ಹರಾಗಿರುತ್ತಾರೆ. 1 ಲಕ್ಷ ರೂ.ವರೆಗಿನ ಸಂಬಳ ಹೊಂದಿರುವ ಉದ್ಯೋಗಿಗಳು ಇರುವ ಸಂಸ್ಥೆಗಳ ಉದ್ಯೋಗದಾತರಿಗೆ ಉತ್ತೇಜನ ದೊರೆಯಲಿವೆ. ಸರ್ಕಾರ ಉದ್ಯೋಗದಾತರಿಗೆ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಮಾಸಿಕ 3 ಸಾವಿರ ರೂ.ತನಕ ಎರಡು ವರ್ಷಗಳ ಅವ ಧಿಗೆ ಪ್ರೋತ್ಸಾಹ ನೀಡುತ್ತದೆ. ಉತ್ಪಾದನಾ ವಲಯಕ್ಕೆ ಪ್ರೋತ್ಸಾಹಕಗಳನ್ನು 3 ಮತ್ತು 4ನೇ ವರ್ಷಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು. ಅಕೌಂಟ್ಸ್ ಆಫೀಸರ್ ಯು.ಪಾಂಡುರಂಗ ಕಿಣಿ, ಅನುಷ್ಠಾನ ಅಧಿಕಾರಿ ಅನಿತಾ ಆರ್., ಅಧಿಕಾರಿಗಳಾದ ನಾಗೇಂದ್ರ ಬಾಬು ಗುಟ್ಟಿ, ಬೆನ್ನಿ ಲೋಬೊ ಸುದ್ದಿಗೋಷ್ಠಿಯಲ್ಲಿದ್ದರು.

[t4b-ticker]
error: Content is protected !!