ಗುರುದಕ್ಷಿಣೆ ಸಮರ್ಪಿಸಿ ನಿಧನರಾದ ಅರೆಸೆಸ್ಸ್ ಕಾರ್ಯಕರ್ತ ಬಾಬು ದೇವಾಡಿಗ

Picture of Savistara

Savistara

Bureau Report

ಬ್ರಹ್ಮಾವರ,ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ಹಿರಿಯ ಕಾರ್ಯಕರ್ತ, ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಬಾಬು ದೇವಾಡಿಗ (76) ಅವರು ಜು. 13ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ಹಠ ಹಿಡಿದು ರವಿವಾರ ಸಂಜೆ ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಆರೆಸ್ಸೆಸ್‌ನ ಗುರು ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಗುರುದಕ್ಷಿಣೆ ಸಮರ್ಪಿಸಿ ಮನೆಗೆ ಮರಳಿದವರೇ ಇಹಲೋಕ ತ್ಯಜಿಸಿದ್ದಾರೆ. ‘ಭಾರತ್ ಮಾತಾ ಕೀ ಜೈ’ ಎಂದದ್ದೇ ಅವರ ಕೊನೆಯ ಮಾತಾಗಿತ್ತು. ಮಂಡಲ, ಬಳಿಕ ತಾಲೂಕು ಕಾರ್ಯವಾಹ, ಅನಂತರ ಜಿಲ್ಲಾ ಸಹ ಕಾರ್ಯವಾಹರಾಗಿ ಸೇವೆ ಸಲ್ಲಿಸಿದ್ದರು. ಸುಮಾರು 50 ವರ್ಷ ತಾಲೂಕಿನಾದ್ಯಂತ ಸೈಕಲ್‌ನಲ್ಲೇ ಸುತ್ತಿ ಹಿಂದುತ್ವ ರಾಷ್ಟ್ರೀಯತೆ ವಿಚಾರಗಳನ್ನು ತಿಳಿಸಿದ್ದರು.

ಬ್ರಹ್ಮಾವರ ಸಾರ್ವಜನಿಕ ಗಣೇಶೋತ್ಸವ ಸಮಿತಿಯಲ್ಲಿ ಸುದೀರ್ಘ ಕಾಲ ಪ್ರಧಾನ ಕಾರ್ಯದರ್ಶಿಯಾಗಿ, ಇತ್ತೀಚಿನ ವರ್ಷಗಳಿಂದ ಅಧ್ಯಕ್ಷರಾಗಿ ಸಕ್ರಿಯರಾಗಿದ್ದರು. ಎಸ್‌ಎಂಎಸ್ ಪ.ಪೂ. ಕಾಲೇಜಿನಲ್ಲಿ ಶಿಕ್ಷಕೇತರ ಸಿಬಂದಿಯಾಗಿ ನಿವೃತ್ತರಾಗಿದ್ದರು. ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ, ರಘುಪತಿ ಭಟ್, ಆರೆಸ್ಸೆಸ್‌ನ ಹಿರಿಯ ಪ್ರಚಾರಕ ದಾ.ಮ. ರವೀಂದ್ರ, ವಿಭಾಗ ಸಂಘ ಚಾಲಕ ಡಾ। ನಾರಾಯಣ ಶೆಣೈ, ಪ್ರಮುಖರು, ಸ್ವಯಂ ಸೇವಕರು ಸಂತಾಪ ಸೂಚಿಸಿದ್ದಾರೆ.

[t4b-ticker]
error: Content is protected !!