
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ವ್ಯಾಪ್ತಿಯ ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಬಳಿಯ ಕಡಲ ತೀರದಲ್ಲಿ ಎಂದಿನಂತೆ ಮೀನುಗಾರಿಕೆಗೆ ಮಾಡಲು ದೋಣಿಯಲ್ಲಿ ತೆರಳಿದ ನಾಲ್ಕು ಮಂದಿ ಮೀನುಗಾರರು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಪರಿಣಾಮ ದೋಣಿ ಮಗುಚಿಕೊಂಡು ನಾಲ್ವರು ಮೀನುಗಾರರು ಸಮುದ್ರದ ಪಾಲಾಗಿ ಮೂವರು ಕಾಣೆಯಾಗಿ ಒಬ್ಬರು ಈಜಿಕೊಂಡು ದಡ ಸೇರಿರುವ ವಿಷಯ ತಿಳಿದ ಕೂಡಲೇ ಘಟನೆಯ ಸ್ಥಳಕ್ಕೆ ಇಂದು ಸಂಸದ ಬಿ.ವೈ ರಾಘವೇಂದ್ರ ಭೇಟಿ ನೀಡಿದರು.

ಘಟನೆಯ ಕುರಿತು ಸ್ಥಳೀಯ ಮೀನುಗಾರರಿಂದ, ಪೊಲೀಸ್ ಹಾಗೂ ಮೀನುಗಾರಿಕೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕಾಣೆಯಾಗಿರುವ ಮೀನುಗಾರರನ್ನು ಅತಿ ಶೀಘ್ರವೇ ಹುಡುಕಲು ಸೂಕ್ತ ನಿರ್ದೇಶನ ನೀಡುವಂತೆ ಹಾಗೂ ಸರ್ಕಾರದಿಂದ ಮೀನುಗಾರರ ಕುಟುಂಬಕ್ಕೆ ಅಗತ್ಯ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ಒತ್ತಾಯಿಸಿದರು
ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದ್ದು ಯಾವ ಮೀನುಗಾರರು ಜೀವ ಪಣಕ್ಕಿಟ್ಟು ಸಮುದ್ರಕ್ಕೆ ಇಳಿಯದಂತೆ ಈ ಸಂದರ್ಭದಲ್ಲಿ ಮನವಿ ಮಾಡುತ್ತೇನೆ. ಜೊತೆಗೆ ಕಾಣೆಯಾಗಿರುವ ಮೀನುಗಾರರ ಕುಟುಂಬಗಳೊಂದಿಗೆ ನಾನು ಸದಾ ಜೊತೆಗಿರುತ್ತೇನೆ ಎಂದು ಭರವಸೆ ನೀಡಿದರು
ಈ ಸಂದರ್ಭದಲ್ಲಿ ಉಡುಪಿ – ಚಿಕ್ಕಮಂಗಳೂರು ಲೋಕಸಭಾ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು, ಕುಂದಾಪುರ ಶಾಸಕರಾದ ಕಿರಣ್ ಕೊಡ್ಗಿ ಅವರು, ಜಿಲ್ಲಾಧ್ಯಕ್ಷರಾದ ನವೀನ್ ಅವರು,
ಮಂಡಲ ಅಧ್ಯಕ್ಷರಾದ ಶ್ರೀಮತಿ ಅನಿತಾ ಅವರು, ಜಿಲ್ಲಾ ರಕ್ಷಣಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.














































