ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೇಮಕಾತಿಗೆ ತಡೆಯಾಜ್ಞೆ ಕೋರಿ ದಾಖಲಾದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ. ಆಕಾಶ್ ಎಂಬವರು ವ್ಯವಸ್ಥಾಪನಾ ಸಮಿತಿಯ ನೇಮಕಾತಿ ಕಾನೂನುಬಾಹಿರ ಎಂದು ಆರೋಪಿಸಿ, ತಡೆಯಾಜ್ಞೆಗಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೇಮಕಾತಿಗೆ ತಡೆಯಾಜ್ಞೆ ಕೋರಿ ದಾಖಲಾದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
ಆಕಾಶ್ ಎಂಬವರು ವ್ಯವಸ್ಥಾಪನಾ ಸಮಿತಿಯ ನೇಮಕಾತಿ ಕಾನೂನುಬಾಹಿರ ಎಂದು ಆರೋಪಿಸಿ, ತಡೆಯಾಜ್ಞೆಗಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ಹಲವು ಬಾರಿ ದಿನಾಂಕ ನಿಗದಿಯಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ವಿಚಾರಣೆ ನಡೆಯದೆ ಇರುತ್ತಿತ್ತು. ಮತ್ತು ಕೆಲವು ಬಾರಿ ಭಾಗಶಃ ವಿಚಾರಣೆ ನಡೆದು ಮುಂದಿನ ದಿನಾಂಕ ನೀಡಲಾಗುತ್ತಿತ್ತು. ಅರ್ಜಿದಾರರು ಮತ್ತು ಅವರ ಬೆಂಬಲಿಗರು ತಡೆಯಾಜ್ಞೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರೆ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಮತ್ತು ಅವರ ಬೆಂಬಲಿಗರು ವಿಚಾರಣೆಯೇ ಇನ್ನೂ ಆರಂಭವಾಗಿಲ್ಲ ಎಂದು ವಾದಿಸಿದ್ದರು.
ಅರ್ಜಿದಾರರು ಸರ್ಕಾರವನ್ನು ಮಾತ್ರ ಪ್ರತಿವಾದಿಯಾಗಿ ಮಾಡಿದ್ದರಿಂದ, ಹರೀಶ್ ಇಂಜಾಡಿ ತಾವೂ ಪ್ರತಿವಾದಿಯಾಗಬೇಕೆಂದು ಕೋರ್ಟ್ಗೆ ಮನವಿ ಮಾಡಿದ್ದರು.
ಜುಲೈ 15, 2025ರಂದು ನಡೆದ ವಿಚಾರಣೆಯಲ್ಲಿ. ಅರ್ಜಿದಾರರ ಪರವಾಗಿ ನ್ಯಾಯವಾದಿ ವಿವೇಕ್ ರೆಡ್ಡಿ, ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವಕೇಟ್ ಜನರಲ್ ದೇವದಾಸ್, ಮತ್ತು ಹರೀಶ್ ಇಂಜಾಡಿ ಪರವಾಗಿ ಹಿರಿಯ ಕೌನ್ಸೆಲ್ ರವಿಶಂಕರ್ ಹಾಗೂ ನ್ಯಾಯವಾದಿ ಕರುಣಾಕರ ಗೌಡ ವಾದ ಮಂಡಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು, ವ್ಯವಸ್ಥಾಪನಾ ಸಮಿತಿಯ ನೇಮಕಾತಿ ಕಾನೂನುಬದ್ಧವಾಗಿದೆ ಎಂದು ತೀರ್ಮಾನಿಸಿ, ತಡೆಯಾಜ್ಞೆ ನೀಡಲು ನಿರಾಕರಿಸಿದರು. ಜೊತೆಗೆ, ಹರೀಶ್ ಇಂಜಾಡಿ ಸೇರಿದಂತೆ ಒಂಬತ್ತು ಮಂದಿ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ಪ್ರತಿವಾದಿಗಳನ್ನಾಗಿ ಸೇರಿಸಿ, ಅವರಿಗೆ ನೋಟೀಸ್ ಜಾರಿ ಮಾಡಲು ನಿರ್ದೇಶಿಸಿದರು.














































