ದರ್ಶನ್ ಫ್ಯಾನ್ಸ್ ವಿರುದ್ಧ ಕಾನೂನು ಸಮರಕ್ಕಿಳಿದ ರಮ್ಯಾ ಅವರಿಗೆ ಅನೇಕರು ಬೆಂಬಲ ಸೂಚಿಸಿದ್ದು, ನಟಿ ಧನ್ಯವಾದ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಅವರು ದರ್ಶನ್ ಫ್ಯಾನ್ಸ್ ವಿರುದ್ಧ ಕಾನೂನು ಹೋರಾಟಕ್ಕಿಳಿದಿದ್ದು, ಅನೇಕರು ಬೆಂಬಲ ಸೂಚಿಸಿದ್ದಾರೆ. ಇದೀಗ ನಟಿ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಕಾಮೆಂಟ್ಗಳು, ಟ್ರೋಲ್ಗಳು ಮತ್ತು ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಸೋಮವಾರ 30ಕ್ಕೂ ಹೆಚ್ಚು ಇನ್ಸ್ಟಾಗ್ರಾಮ್ ಖಾತೆಗಳ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಮತ್ತು ಐಟಿ ಕಾಯ್ದೆಯ ಹಲವು ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣವನ್ನು ಹೆಚ್ಚಿನ ತನಿಖೆಗೆ ಸಿಸಿಬಿಗೆ ವರ್ಗಾಯಿಸಲಾಗಿದೆ.ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಮಾಡಿಕೊಳ್ಳುವವರ ವಿರುದ್ಧದ ರಮ್ಯಾ ಕಾನೂನು ಹೋರಾಟವನ್ನು ಸೋಷಿಯಲ್ ಮೀಡಿಯಾ ಮೂಲಕ ಹಲವರು ಪ್ರಶಂಸಿಸಿದ್ದಾರೆ. ಇದೀಗ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ (ಮೆಸೇಜ್/ಪೋಸ್ಟ್)ಗಳ ಸ್ಕ್ರೀನ್ಶಾಟ್ ಹಂಚಿಕೊಂಡಿರುವ ನಟಿ, ”ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು, ನಾನು ಸದಾ ಚಿರಋಣಿ” ಎಂದು ಬರೆದುಕೊಂಡಿದ್ದಾರೆ.

ನಟಿ ಹಂಚಿಕೊಂಡಿರುವ ಸ್ಕ್ರೀನ್ಶಾಟ್ಗಳು: ”ನ್ಯಾಯದ ಪರ ಇರುವ ನೀವು, ಎಲ್ಲಾ ಹೆಣ್ಣು ಮಕ್ಕಳಿಗೂ ಸ್ಫೂರ್ತಿ” ಎಂದು ಅಭಿಮಾನಿಯೋರ್ವರು ಕಾಮೆಂಟ್ ಮಾಡಿದ್ದಾರೆ. ಮತ್ತೊಂದು ಪ್ರತಿಕ್ರಿಯೆಯಲ್ಲಿ, ”ಮೇಡಂ ನೀವು ಮಾಡುತ್ತಿರೋ ಕೆಲಸ ಒಳ್ಳೆಯದು. ಯಾವ ಹೆಣ್ಣು ಮಕ್ಕಳಿಗೂ ಅನ್ಯಾಯ ಆಗಬಾರದು. ನಾವು ನಿಮ್ಮ ಜೊತೆ ಇದ್ದೇವೆ” ಎಂದು ಬರೆಯಲಾಗಿದೆ. ಇದೇ ರೀತಿ ಅನೇಕ ಪ್ರತಿಕ್ರಿಯೆಗಳು ಹರಿದುಬಂದಿವೆ.
ಜೊತೆಗೆ ಕ್ಯಾಪ್ಷನ್ ಸೆಕ್ಷನ್ನಲ್ಲಿ, ”ದ್ವೇಷ ಮತ್ತು ಹತಾಶೆಯಿಂದ ತುಂಬಿರುವ ಜಗತ್ತಿನಲ್ಲಿ, ಪ್ರೀತಿ ಮತ್ತು ಕರುಣೆಯೇ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುತ್ತದೆ – ನನಗೆ ಸ್ವಲ್ಪ ಪ್ರೀತಿಯನ್ನು ತೋರಲು ಸಮಯ ತೆಗೆದುಕೊಂಡಿದ್ದಕ್ಕಾಗಿ ಪ್ರತಿಯೊಬ್ಬರಿಗೂ ಧನ್ಯವಾದಗಳು” ಎಂದು ಬರೆದಿದ್ದಾರೆ.
ಶಿವರಾಜ್ಕುಮಾರ್ ಬೆಂಬಲ:
”ರಮ್ಯಾ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ಬಗ್ಗೆಯೂ ಈ ರೀತಿ ಮಾತನಾಡುವುದು ಸರಿಯಲ್ಲ. ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ಒಬ್ಬ ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟ ಮೊದಲು ಒಬ್ಬ ವ್ಯಕ್ತಿಯಾಗಿ ನಾವು ಗೌರವಿಸುವುದು ತುಂಬಾನೇ ಮುಖ್ಯ. ಸೋಷಿಯಲ್ ಮೀಡಿಯಾ ಒಂದು ಬಲಿಷ್ಠವಾದ ಅಸ್ತ್ರ. ಅದನ್ನು ತಮ್ನ ಏಳಿಗೆಗಾಗಿ ಬಳಸಬೇಕೇ ಹೊರತು ಅಶ್ಲೀಲ ಪದಗಳಿಂದ ನಿಂದಿಸುವುದಕ್ಕೆ, ದ್ವೇಷ, ಅಸೂಯೆ ಬಿತ್ತಲು ಬಳಸಬಾರದು. ಸದ್ಯ ರಮ್ಯಾ ತೆಗೆದುಕೊಂಡಿರುವ ನಿಲುವು ಸರಿಯಿದೆ. ಅವರ ಪರವಾಗಿ ನಾವು ಸದಾ ಜೊತೆಯಾಗಿ ನಿಲ್ಲುತ್ತೇವೆ” ಎಂದು ನಟ ಶಿವರಾಜ್ಕುಮಾರ್ ಹೇಳಿದ್ದರು.
ವಿನಯ್ ರಾಜ್ಕುಮಾರ್ ಬೆಂಬಲ: ”ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ ಬೆಳವಣಿಗೆಗೂ ಮುನ್ನ ನಾಶವಾಗಬೇಕು” ಎಂದು ವಿನಯ್ ರಾಜ್ಕುಮಾರ್ ತಿಳಿಸಿದ್ದರು.











































