ಬಾಲ್ಯ ವಿವಾಹ, ದೇವದಾಸಿ ನಿಷೇಧ ಮಸೂದೆ, ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ)ವಿಧೇಯಕ ಸೇರಿ ವಿಧಾನಸಭೆಯಲ್ಲಿ ಹಲವು ವಿಧೇಯಕಗಳು ಅಂಗೀಕಾರಗೊಂಡವು.
ಬೆಂಗಳೂರು: ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ ಹಾಗೂ ಸಾಲಿನ ಕರ್ನಾಟಕ ದೇವದಾಸಿ (ಪ್ರತಿಬಂಧಕ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ವಿಧೇಯಕಗಳು ಸೇರಿ ವಿಧಾನಸಭೆಯಲ್ಲಿ ಸೋಮವಾರ ವಿವಿಧ ಮಸೂದೆಗಳು ಅಂಗೀಕಾರಗೊಂಡಿತು.ತಡರಾತ್ರಿವರೆಗೆ ನಡೆದ ವಿಧಾನಸಭೆ ಕಲಾಪದಲ್ಲಿ ವಿವಿಧ ಮಸೂದೆಗಳು ಅಂಗೀಕಾರಗೊಂಡವು. ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ)ವಿಧೇಯಕ ಸುದೀರ್ಘ ಚರ್ಚೆ ಬಳಿಕ ಅಂಗಿಕೃತಗೊಂಡಿತು. ಹೊಸ ಮಸೂದೆಯಲ್ಲಿ ಸಹಕಾರ ಸಂಘಗಳಲ್ಲಿ ಷೇರು ಹೊಂದಿರುವ ಎಲ್ಲರಿಗೂ ಮತ ಚಲಾವಣೆ, ಸ್ಪರ್ಧಿಸುವ ಹಕ್ಕು ಕಲ್ಪಿಸಲಿದೆ. ಸ್ಪರ್ಧೆ, ಮತ ಚಲಾವಣೆಗೆ ನಿರ್ದಿಷ್ಟ ವಹಿವಾಟು ನಡೆಸಬೇಕು, ಸಾಮಾನ್ಯ ಸಭೆಯಲ್ಲಿ ಭಾಗವಹಿಸಬೇಕೆಂಬ ನಿರ್ಬಂಧ ತೆರವು ಮಾಡಲಾಗುವುದು.
ಸಹಕಾರ ಚುನಾವಣಾ ಪ್ರಾಧಿಕಾರ ರದ್ದುಗೊಳಿಸಿ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ (ಸಿಇಒ) ಚುನಾವಣೆ ನಡೆಸುವ ಅಧಿಕಾರ ನೀಡಲಾಗಿದೆ. ಅಪೆಕ್ಸ್ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಸರ್ಕಾರದಿಂದ ನೆರವು ಪಡೆದ ಸಹಕಾರ ಸಂಘಗಳಿಗೆ ಮೀಸಲು ಆಧಾರದಲ್ಲಿ ಮೂವರು ಸದಸ್ಯರ ನಾಮ ನಿರ್ದೇಶನವಾಗಲಿದೆ. ನಾಮನಿರ್ದೇಶಿತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು, ಮತ ಚಲಾಯಿಸಲು ಮತ್ತು ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಇರಲಿದೆ. ಕಳೆದ ಅಧಿವೇಶನದಲ್ಲೇ ಅಂಗೀಕಾರಗೊಂಡಿದ್ದ ಈ ವಿಧೇಯಕಕ್ಕೆ ರಾಜ್ಯಪಾಲರ ಆಕ್ಷೇಪ ಬಂದಿತ್ತು. ನಂತರ ತಿದ್ದುಪಡಿಯೊಂದಿಗೆ ಸದನದಲ್ಲಿ ಮತ್ತೆ ವಿಧೇಯಕ ಮಂಡಿಸಿ ಇದೀಗ ಅಂಗೀಕಾರಗೊಂಡಿದೆ.ಇದೇ ವೇಳೆ, ವಿಧಾನಸಭೆಯಲ್ಲಿ ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವರ್ಹಣೆ (ತಿದ್ದುಪಡಿ) ವಿಧೇಯಕವನ್ನು, ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) (ತಿದ್ದುಪಡಿ)ವಿಧೇಯಕ, 1% ಸೆಸ್ ವಿಧಿಸುವ ಕರ್ನಾಟಕ ಅಗ್ನಿಶಾಮಕದಳ (ತಿದ್ದುಪಡಿ) ವಿಧೇಯಕಗಳೂ ಅಂಗೀಕಾರಗೊಂಡಿತು.
ಇನ್ನು ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವೆಗಳ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿತು. ಎಂಬಿಬಿಎಸ್ ಕೋರ್ಸುಗಳನ್ನು ಪೂರೈಸಿದ ಅಭ್ಯರ್ಥಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯ ಈ ಮೊದಲೇ ಇತ್ತು. ಗ್ರಾಮೀಣ ಪ್ರದೇಶಗಳಿಗೆ ಅಭ್ಯರ್ಥಿಗಳ ಸ್ಥಳ ನಿಯುಕ್ತಿ ಬಳಿಕ ಹೆಚ್ಚುವರಿ ಉಳಿಯುವ ಅಭ್ಯರ್ಥಿಗಳನ್ನು ನಗರ ಪ್ರದೇಶಗಳಿಗೂ ಸ್ಥಳ ನಿಯುಕ್ತಿಗೆ ಅವಕಾಶ ಕಲ್ಪಿಸಲಾಗಿದೆ.ಗ್ರಾಮೀಣ ಪ್ರದೇಶಗಳ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಉಳಿದ ಆಸ್ಪತ್ರೆಗಳಿಗೆ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದವರಿಗೆ ಕಡ್ಡಾಯ ಸೇವೆಗೆ ನಿಯುಕ್ತಿ. ಒಂದು ವರ್ಷದ ಕಡ್ಡಾಯ ಸೇವೆ ತಪ್ಪಿದ್ದಲ್ಲಿ ದಂಡ ಕಟ್ಟಬೇಕು. ಕಡ್ಡಾಯ ಸೇವೆ ವೇಳೆ ಮುಚ್ಚಳಿಕೆ ಬರೆದುಕೊಡಬೇಕು. ಕಡ್ಡಾಯ ಸೇವೆಯ ಷರತ್ತುಗಳನ್ನು ಉಲ್ಲಂಘಿಸಿದರೆ ಯಾವುದೇ ಪರಿಣಾಮಕ್ಕೆ ಸಿದ್ಧವಾಗಿರಬೇಕು. ಕಡ್ಡಾಯ ಸೇವೆಯನ್ನು ಆಧರಿಸಿ ಉನ್ನತ ವ್ಯಾಸಂಗ, ಸೂಪರ್ ಸ್ಪೆಷಾಲಿಟಿ ಕೋರ್ಸ್ ಪಡೆಯಲು ಅನುಮತಿ ಸಿಗಲಿದೆ. ಈ ಕುರಿತ ಷರತ್ತು ಬದ್ಧ ಎನ್ಒಸಿ ಪತ್ರವನ್ನು ಅಭ್ಯರ್ಥಿಗಳು ಸಲ್ಲಿಕೆ ಕೊಡಬೇಕು.
ಇದೇ ವೇಳೆ 2025ನೇ ಸಾಲಿನ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ ಅಂಗೀಕಾರಗೊಂಡಿತು.














































