ಸಾವಿರಾರು ಕೋಟಿ ಬಡ್ಡಿ ವ್ಯವಹಾರ: ಶಿವಂ ಅಸೋಸಿಯೇಟ್ ಮಾಲೀಕ ನೀಲಣ್ಣವರ ಬಂಧನ

Picture of Savistara

Savistara

Bureau Report

ಬೆಳಗಾವಿ: ‘ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡಿದ ಇಲ್ಲಿನ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ₹50 ಕೋಟಿಗೂ ಹೆಚ್ಚಿನ ಅವ್ಯವಹಾರ ಮೊದಲ ಹಂತದಲ್ಲೇ ಖಾತ್ರಿಯಾಗಿದೆ. ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ತನಿಖೆ ನಡೆದಿದೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

‘ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ಇವರ ಬಳಿ ಠೇವಣಿ ಇಟ್ಟಿದ್ದಾರೆ. ಕೈಸಾಲದ ಹೆಸರಿನಲ್ಲಿ ಆರೋಪಿ ಹಣ ಸಂಗ್ರಹಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಲ್ಲೂ ಇವರ ಅವ್ಯವಹಾರಗಳು ಪತ್ತೆಯಾಗಿವೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.’ಒಬ್ಬರು ₹1 ಲಕ್ಷ ಠೇವಣಿ ಇಟ್ಟರೆ ಶೇ 36ರಷ್ಟು ಬಡ್ಡಿ ನೀಡಲಾಗುವುದು ಎಂದು ಈ ವ್ಯಕ್ತಿ ಪತ್ರಿಕಾ ಜಾಹೀರಾತು ನೀಡಿದ್ದರು. ದಶಕಗಳಿಂದ ಈ ವ್ಯವಹಾರ ನಡೆದಿದೆ. ಹೆಚ್ಚಿನ ಬಡ್ಡಿ ಆಸೆಗೆ 35 ಸಾವಿರಕ್ಕೂ ಹೆಚ್ಚು ಜನ ಹೂಡಿಕೆ ಮಾಡಿದ್ದಾರೆ. ಎಷ್ಟು ಸಾವಿರ ಕೋಟಿ ಠೇವಣಿ ಇದೆ ಎಂಬುದು ತನಿಖೆ ನಂತರ ಹೊರಬೀಳಲಿದೆ’ ಎಂದರು.

‘ಜಿಲ್ಲಾಧಿಕಾರಿ ಕಚೇರಿಯಲ್ಲಿ ‘ಕೆಪಿಐಡಿ- ಬಡ್ಸ್ ಆ್ಯಕ್ಟ್’ ಅಡಿ ತನಿಖಾ ಶಾಖೆಯನ್ನು ತೆರೆದಿದ್ದೇವೆ. ಮಾರುಕಟ್ಟೆ ಇಂಟಲಿಜೆನ್ಸ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊಗಳನ್ನು ಆಧರಿಸಿ ಇವರ ಕಚೇರಿ, ಮನೆ ಮೇಲೆ ದಾಳಿ ಮಾಡಲಾಗಿದೆ. ಸಾಕಷ್ಟು ದೊಡ್ಡ ಮೊತ್ತದ ವ್ಯವಹಾರದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿ ತಿಂಗಳು ಒಂದು ಅಕೌಂಟಿನಿಂದ ₹300ರಿಂದ ₹400 ಕೋಟಿಯ ವ್ಯವಹಾರ ಮಾಡಿದ್ದು ಗೊತ್ತಾಗಿದೆ. ಆದರೆ, ಯಾವುದೇ ವ್ಯವಹಾರಕ್ಕೂ ಆರ್‌ಬಿಐ ಅಥವಾ ಸಹಕಾರ ಸಂಸ್ಥೆಯ ನಿಯಮಗಳನ್ನು ಪಾಲಿಸಿಲ್ಲ’ ಎಂದು ವಿವರಿಸಿದರು.

‘ಈ ವ್ಯಕ್ತಿ ಯಾವ ಬ್ಯಾಂಕುಗಳ ಜತೆಗೆ ವ್ಯವಹಾರ ಮಾಡಿದ್ದಾರೋ ಅವರನ್ನೂ ತನಿಖೆಯಲ್ಲಿ ಪರಿಗಣಿಸಲಾಗುವುದು. ಇನ್ನಷ್ಟು ಆರೋಪಿಗಳು ಕೈ ಜೋಡಿಸಿದ್ದು, ಎಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುತ್ತೇವೆ’ ಎಂದು ನಗರ ಪೊಲೀಸ್‌ ಕಮಿಷನರ್ ಭೂಷಣ ಬೊರಸೆ ಪ್ರತಿಕ್ರಿಯಿಸಿದರು.’ಯಾರು ಎಷ್ಟು ಹಣ ಕೊಡುತ್ತಾರೋ ಅಷ್ಟೇ ಮೊತ್ತದ ಚೆಕ್‌ವೊಂದನ್ನು ಈ ವ್ಯಕ್ತಿ ಮರಳಿ ನೀಡಿದ್ದಾರೆ. ಇಲ್ಲಿಯವರೆಗೂ ನಿಯಮಿತವಾಗಿ ಬಡ್ಡಿ ಕೊಟ್ಟಿದ್ದಾರೆ. ಹೀಗಾಗಿ, ಜನರಿಗೆ ಅನುಮಾನ ಬಂದಿಲ್ಲ. ಮುಂದೆ ನಡೆಯಬಹುದಾದ ದೊಡ್ಡ ಅನಾಹುತ ತಡೆಯುವ ಉದ್ದೇಶದಿಂದ ಈ ದಾಳಿ ಮಾಡಿದ್ದೇವೆ’ ಎಂದರು.

ರಾತ್ರಿ ಬಂಧನ: ಜಿಲ್ಲಾಧಿಕಾರಿ ನಿರ್ದೇಶನದಂತೆ ಶಿವಂಅಸೋಸೆಯೆಟ್ಸ್ ಮೇಲೆ ಗುರುವಾರ ಬೆಳಿಗ್ಗೆಯೇ ದಾಳಿ ಮಾಡಿದ ಉಪವಿಭಾಗಾಧಿಕಾರಿ ಶ್ರವಣ ನಾಯಕ್ ಅವರ ತಂಡ 24 ತಾಸು ಪರಿಶೀಲನೆ ನಡೆಸಿತು. ಶುಕ್ರವಾರ ರಾತ್ರಿ 10ರ ಸುಮಾರಿಗೆ ಎಫ್‌ಐಆ‌ರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಯಿತು. ಬಡ್ಸ್ ಆ್ಯಕ್ಟ್ ಸೆಕ್ಷನ್-21 ಮತ್ತು ಕೆಪಿಐಡಿ ಸೆಕ್ಷನ್-9ರ ಅಡಿಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

ದಶಕಗಳಿಂದ ಹೂಡಿಕೆ ವ್ಯವಹಾರ ನಡೆಸುತ್ತಿದ್ದರೂ ಯಾರ ಗಮನಕ್ಕೂ ಇರಲಿಲ್ಲ. ಆದರೆ, ಕಡೂರಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶಿವಾನಂದ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ‘ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ. ಯಾರಿಗೂ ಹೆದರುವುದಿಲ್ಲ. ನನ್ನ ಬಳಿ 15 ಸಾವಿರ ಬಂದೂಕುಗಳಿವೆ. ಬೇಕಾದರೆ ನಾನು 2028ಕ್ಕೆ ಸಿ.ಎಂ ಆಗಿ ತೋರಿಸಲೇನು’ ಎಂದೆಲ್ಲ ಹೇಳಿಕೊಂಡಿದ್ದರು.

ಯಾರು ಈ ನೀಲಣ್ಣವರು: ಶಿವಾನಂದ ಹುಬ್ಬಳ್ಳಿಯ ಉಣಕಲ್ಮೂಲದವರು. ಇವರ ತಂದೆ ಸೇನೆಯಲ್ಲಿದ್ದರು. ನಿವೃತ್ತಿ ಬಳಿಕ ಕೆಇಬಿನಲ್ಲಿ ಕೆಲಸ ಮಾಡುತ್ತಿದ್ದಾಗ ನಿಧನರಾದರು. ಆ ನೌಕರಿ ಶಿವಾನಂದ ಸೋದರರೊಬ್ಬರಿಗೆ ಸಿಕ್ಕಿದೆ. ಅವರಿಗೆ ಬೆಳಗಾವಿಗೆ ವರ್ಗವಾದಾಗ ಇಡೀ ಕುಟುಂಬ ಇಲ್ಲಿಗೆ ಬಂತು.ದ್ವಿತೀಯ ಪಿಯು ಓದಿರುವ ಶಿವಾನಂದ ಆರಂಭದಲ್ಲಿ ಖಾಸಗಿ ಮೆಡಿಕಲ್‌ ಕಾಲೇಜಿನಲ್ಲಿ ಸಿಪಾಯಿ ಕೆಲಸ ಮಾಡಿದ್ದಾರೆ.2004ರಿಂದ 2006ರವೆಗೆ ಆಟೊದಲ್ಲಿ ಫ್ರಿಜ್‌ ಇಟ್ಟುಕೊಂಡು ಐಸ್‌ಕ್ರೀಮ್ ಮಾರಿದ್ದಾರೆ. ಮುಂದೆ ಐಸ್ಕ್ರೀಮ್ ಕಾರ್ಖಾನೆ ಹಾಕಿದ್ದರು. 2012ರ ನಂತರ ಶಿವಂ ಅಸೋಸಿಯೇಟ್ಸ್ ಎಂಬ ಹೂಡಿಕೆ ಸಂಸ್ಥೆ ಆರಂಭಿಸಿದರು.

*ಅಕ್ಯೂಮೆನ್’ ಆ್ಯಪ್‌ ಅಭಿವೃದ್ಧಿಪಡಿಸಿ, ಅದರ ಮೂಲಕ ಜನರಿಂದ ಹಣ ಹೂಡಿಕೆ ಮಾಡಿಕೊಳ್ಳಲು ಆರಂಭಿಸಿದ್ದರು. ಈ ಆ್ಯಪ್ ಮೂಲಕ ಸಾವಿರಾರು ಕೋಟಿ ಹೂಡಿಕೆಯಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಸೈನಿಕರೇ ಇದ್ದಾರೆ’ ಎಂಬ ಮಾಹಿತಿಯನ್ನು ದಾಳಿ ನಡೆಸಿದ ತಂಡ ನೀಡಿದೆ.

[t4b-ticker]
error: Content is protected !!