ಬನ್ನಡ್ಕದಲ್ಲಿ ಸರ್ವಿಸ್ ರಸ್ತೆ ಸಂಪರ್ಕ:ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಸಂಸದ ಬ್ರಿಜೇಶ್ ಚೌಟ ತುರ್ತು ಮನವಿ

Picture of Savistara

Savistara

Bureau Report

ಮೂಡುಬಿದಿರೆ: ಸಾಣೂರು-ಬಿಕಾರ್ನಕಟ್ಟೆ ಯೋಜನೆಯಡಿ ಬರುವ ಎನ್‌ಎಚ್-169ರ ಬನ್ನಡ್ಕ ಪ್ರದೇಶದಲ್ಲಿ ಅಪೂರ್ಣವಾಗಿರುವ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಸಂಸದ ಬ್ರಿಜೇಶ್ ಚೌಟ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.

ಬನ್ನಡ್ಕ ಭಾಗದಲ್ಲಿ ನಿರಂತರವಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಸಾವು ನೋವುಗಳು ಸಂಭವಿಸುತ್ತಿದೆ. ಹಿನ್ನೆಲೆಯಲ್ಲಿ ಸಂಸದರು ಸ್ಥಳೀಯ ನಿವಾಸಿಗಳು ಹಾಗೂ ಪ್ರಯಾಣಿಕರೊಂದಿಗೆ ಸಭೆ ನಡೆಸಿದಾಗ, ಈ ಭಾಗದಲ್ಲಿ ಸುಮಾರು 650 ರಿಂದ 700 ಮೀಟರ್‌ವರೆಗೆ ಸರ್ವಿಸ್ ರಸ್ತೆ ಸಂಪರ್ಕ ಕಡಿತಗೊಂಡಿರುವುದು ಬೆಳಕಿಗೆ ಬಂದಿದೆ. ಈ ಅಂತರದ ಕಾರಣದಿಂದ ದಿನನಿತ್ಯ ಸಂಚಾರ ಮಾಡುವವರು ಮತ್ತು ಸ್ಥಳೀಯ ವಾಹನಗಳು ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸಲು ಹಾಗೂ ವೇಗದ ಮುಖ್ಯ ಹೆದ್ದಾರಿಯನ್ನು ಅಪಾಯಕಾರಿಯಾಗಿ ದಾಟಲು ಅನಿವಾರ್ಯವಾಗುತ್ತಿದ್ದು. ಇದರಿಂದ ಅಪಘಾತಗಳು ಮರುಕಳಿಸುತ್ತಿವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆದ ಚರ್ಚೆಯಲ್ಲಿ, ಹೆದ್ದಾರಿಯ ಕೆಲವೆಡೆ ಸರ್ವಿಸ್ ರಸ್ತೆ ಕಾಮಗಾರಿ ಎರಡೂ ಬದಿಗಳಲ್ಲೂ ಪೂರ್ಣಗೊಂಡಿರುವುದು ತಿಳಿದುಬಂದಿದೆ. ಆದರೆ ಬನ್ನಡ್ಕದ ನಡುವಿನ ಮಧ್ಯದ ಭಾಗ ಮಾತ್ರ ಸಂಪರ್ಕವಿಲ್ಲದೆ ಉಳಿದಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಇನ್ನಷ್ಟು ಜೀವಹಾನಿಯನ್ನು ತಪ್ಪಿಸುವ ದೃಷ್ಟಿಯಿಂದ, ಈ ಅಪೂರ್ಣವಾಗಿರುವ 640 ಮೀಟರ್ ಸರ್ವಿಸ್ ರಸ್ತೆ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪತ್ರದ ಪ್ರತಿಯನ್ನು ಹೆದ್ದಾರಿ ಪ್ರಾಧಿಕಾರದ ಕರ್ನಾಟಕ ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ. ಬ್ರಹ್ಮಾಂಕ‌ರ್ ಅವರಿಗೂ ಕಳುಹಿಸಿಕೊಡಲಾಗಿದೆ.

[t4b-ticker]
error: Content is protected !!