ಮುಖ್ಯ ಚುನಾವಣಾ ಆಯುಕ್ತರ ನೇಮಕ ಸಮಿತಿಯಲ್ಲಿ ಸಿಜೆಐ ಅಗತ್ಯವಿಲ್ಲ : ಸರಕಾರ ಪ್ರತಿಪಾದನೆ

Picture of Savistara

Savistara

Bureau Report

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಕೈಬಿಟ್ಟ ಕ್ರಮವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಲ್ಲಿ ನ್ಯಾಯಾಂಗದ ಪ್ರಾತಿನಿಧ್ಯವನ್ನು ಸಂವಿಧಾನ ಕಡ್ಡಾಯಪಡಿಸಿಲ್ಲ ಎಂದು ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ನ್ಯಾಯಾಂಗದ ಪ್ರತಿನಿಧಿಯನ್ನು ಸಮಿತಿಯಲ್ಲಿ ಸೇರಿಸಿಕೊಳ್ಳುವುದು ಶಾಸಕಾಂಗದ ಆಯ್ಕೆಯಾಗಿದ್ದು, ಸಂವಿಧಾನಾತ್ಮಕ ಬದ್ಧತೆಯಲ್ಲ ಎಂದು ವಾದಿಸಿದೆ.ನೇಮಕ ಪ್ರಕ್ರಿಯೆಯನ್ನು ಹೆಚ್ಚು ಸ್ವತಂತ್ರಗೊಳಿಸುವ ನಿಟ್ಟಿನಲ್ಲಿ ಐದು ಮಂದಿ ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ ಪೀಠ 2023ರಲ್ಲಿ ತೀರ್ಪು ನೀಡಿ ಅಂತಿಮವಾಗಿ ಕಾನೂನು ರೂಪಿಸುವವರೆಗೆ ತಾತ್ಕಾಲಿಕವಾಗಿ ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿಗಳು ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ನೇಮಕ ಮಾಡಬೇಕು ಎಂದು ಸೂಚಿಸಿತ್ತು. ಆ ಬಳಿಕ ಸಂಸತ್ತು ಸಿಇಸಿ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಸ್ಥಿತಿಗತಿ ಮತ್ತು ಕಚೇರಿ ನಿಬಂಧನೆಗಳು) ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯಡಿ, ನೇಮಕಾತಿ ಸಮಿತಿಯಲ್ಲಿ ಪ್ರಧಾನಮಂತ್ರಿ, ಸಂಪುಟದರ್ಜೆ ಸಚಿವ ಮತ್ತು ವಿರೋಧ ಪಕ್ಷದ ನಾಯಕ ಇರುತ್ತಾರೆ. ಈ ಕಾನೂನಿನ ಮಾನ್ಯತೆಯನ್ನು ಇದೀಗ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಸಿಜೆಐ ಬದಲು ಸಂಪುಟದರ್ಜೆ ಸಚಿವರನ್ನು ಸಮಿತಿಯಲ್ಲಿ ನಿಯೋಜಿಸಿಕೊಳ್ಳುವ ಮೂಲಕ ಚುನಾವಣಾ ಆಯೋಗದ ಸ್ವಾತಂತ್ರ್ಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ ಎಂಬ ಅರ್ಜಿದಾರರ ವಾದವನ್ನು ಸರ್ಕಾರದ ಅಫಿಡವಿಟ್ ನಲ್ಲಿ ವಿರೋಧಿಸಲಾಗಿದೆ. ಸಂಸತ್ತಿನಲ್ಲಿ ಆಂಗೀಕರಿಸಲಾದ ಕಾನೂನಿನಲ್ಲಿ ಯಾವುದೇ ಲೋಪದೋಷ ಇಲ್ಲ. ಇದರಿಂದ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯನ್ನು ನಡೆಸಲು ಯಾವುದೇ ತೊಡಕು ಆಗುವುದಿಲ್ಲ ಎಂದು ವಾದಿಸಲಾಗಿದೆ.2026ಕಳೆದ ಏಳು ದಶಕಗಳಿಂದಲೂ ಕೇವಲ ಕಾರ್ಯಾಂಗವೇ ಈ ನೇಮಕಾತಿ ಮಾಡುತ್ತಾ ಬಂದಿದೆ ಎಂಬ ವಾದ ಮಂಡಿಸಿದೆ.

[t4b-ticker]
error: Content is protected !!