ಬೆಂಗಳೂರು: 2022ರಲ್ಲಿ ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ಸಮವಸ್ತ್ರ ನೀತಿಯನ್ನು ಕರ್ನಾಟಕ ಸರ್ಕಾರವು ಬುಧವಾರ (ಮೇ 13) ಅಧಿಕೃತವಾಗಿ ಹಿಂಪಡೆದಿದೆ.
ಈ ಕುರಿತು ಹೊಸ ಅಧಿಸೂಚನೆ ಹೊರಡಿಸಿರುವ ಸರ್ಕಾರ, ವಿದ್ಯಾರ್ಥಿಗಳು ಸಮವಸ್ತ್ರದ ಜೊತೆಗೆ ಹಿಜಾಬ್, ಜನಿವಾರ ಸೇರಿದಂತೆ ತಮ್ಮ ಧಾರ್ಮಿಕ ಮತ್ತು ಸೀಮಿತ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಮುಕ್ತ ಅವಕಾಶ ನೀಡಿದೆ.
ಹೊಸ ಆದೇಶದಲ್ಲಿ ಏನಿದೆ?:ಫೆಬ್ರವರಿ 5, 2022 ರಂದು ಬಿಜೆಪಿ ಸರ್ಕಾರ ಹೊರಡಿಸಲಾಗಿದ್ದ ವಿವಾದಿತ ಸಮವಸ್ತ್ರ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.
ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ತೆರವು ಮಾಡಲಾಗವುದು. ಮುಸ್ಲಿಂ ಸಮುದಾಯದ ಬೇಡಿಕೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿಪಡಿಸಿದ ಸಮವಸ್ತ್ರ ಕಡ್ಡಾಯವಾಗಿರುತ್ತದೆ. ಆದರೆ, ಅದರ ಜೊತೆಗೆ ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಅಭ್ಯಂತರವಿಲ್ಲ. ಹಿಜಾಬ್ (ತಲೆವಸ್ತ್ರ), ಜನಿವಾರ, ಶಿವಧಾರ.ರುದ್ರಾಕ್ಷಿ, ಪೇಟ ಧರಿಸಲು ಅವಕಾಶವಿದೆ ಎಂದಿದ್ದಾರೆ.
ಇದು ಶಾಲೆಯ ಶಿಸ್ತು ಅಥವಾ ಬೋಧನಾ ಪ್ರಕ್ರಿಯೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಗಿದೆ.ಕೇಸರಿ ಶಾಲು ಧಾರ್ಮಿಕ ಅಥವಾ ಸಾಂಪ್ರದಾಯಿಕ ಆಚರಣೆಯ ಭಾಗವಲ್ಲ ಎಂದು ಪರಿಗಣಿಸಿರುವ ಸರ್ಕಾರ, ಅದಕ್ಕೆ ಅನುಮತಿ ನಿರಾಕರಿಸಿದೆ.ವಿದ್ಯಾರ್ಥಿಗಳಮೇಲೆ ಒತ್ತಡ ಹೇರುವಂತಿಲ್ಲಸರ್ಕಾರದ ಆದೇಶದ ಪ್ರಕಾರ, ಯಾವುದೇ ವಿದ್ಯಾರ್ಥಿಯು ಇಂತಹ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸುವಂತೆ ಅಥವಾ ಧರಿಸಬಾರದು ಎಂದು ಒತ್ತಾಯಿಸುವಂತಿಲ್ಲ. ಶಿಸ್ತು. ಸುರಕ್ಷತೆ ಮತ್ತು ವಿದ್ಯಾರ್ಥಿಗಳ ಗುರುತಿಸುವಿಕೆಗೆ ಅಡ್ಡಿಯಾಗದಂತೆ ಇವುಗಳನ್ನು ಧರಿಸಬಹುದಾಗಿದೆ.ಪರೀಕ್ಷಾ ಸಮಯದಲ್ಲಿ ಮಾತ್ರ ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದ ಪರೀಕ್ಷಾ ನಿಯಮಾವಳಿಗಳಿಗೆ ಅನುಗುಣವಾಗಿ ವಸ್ತ್ರಸಂಹಿತೆಯನ್ನು ಪಾಲಿಸಬೇಕಾಗುತ್ತದೆ.
“ಯಾವುದೇ ವಿದ್ಯಾರ್ಥಿಗೆ ಅವರು ಸಾಂಪ್ರದಾಯಿಕ ಸಂಕೇತ ಧರಿಸಿದ್ದಾರೆ ಎಂಬ ಕಾರಣಕ್ಕೆ ಶಾಲಾ ಪ್ರವೇಶ ಅಥವಾ ಪರೀಕ್ಷಾ ಕೊಠಡಿಯ ಪ್ರವೇಶವನ್ನು ನಿರಾಕರಿಸುವಂತಿಲ್ಲ’ವೆಂದು ಸರ್ಕಾರ ಹೇಳಿದೆ.ಸೌಹಾರ್ದತೆ ಮತ್ತು ಸಮಾನತೆಗೆ ಒತ್ತು : ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ “ಇವ ನಮ್ಮವ” ಎಂಬ ತತ್ವವನ್ನು ಉಲ್ಲೇಖಿಸಿರುವ ಸರ್ಕಾರ, ಶಿಕ್ಷಣ ಸಂಸ್ಥೆಗಳು ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನೂ ಒಳಗೊಳ್ಳುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದೆ. ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಗಳು (SDMC) ಯಾವುದೇ ವಿದ್ಯಾರ್ಥಿಗೆ ಅವಮಾನವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.













































