ಬೆಂಗಳೂರು: ನಿಗಮ ಮಂಡಳಿಗಳ (corporation boards) ಅಧ್ಯಕ್ಷ (chairman), ಉಪಾಧ್ಯಕ್ಷರ (vice-chairman) ನೇಮಕದಲ್ಲಿ ಗೊಂದಲ ಮುಂದುವರೆದಿದೆ. ಅಳೆದು ತೂಗಿ ಇತ್ತೀಚಿಗಷ್ಟೇ ನಿಗಮ ಮಂಡಳಿಗೆ ಅಧ್ಯಕ್ಷ ಉಪಾಧ್ಯಕ್ಷರನ್ನು ಸರ್ಕಾರ (government) ನೇಮಿಸಿತ್ತು. ಆದರೆ ಇದೀಗ ಬಿಎಂಟಿಸಿ (BMTC) ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅದಲು ಬದಲು ಮಾಡಿ ಸರ್ಕಾರ ಆದೇಶಿಸಿದೆ. ಬಿಎಂಟಿಸಿ ಅಧ್ಯಕ್ಷರಾಗಿ ನೇಮಕ ಆದವ್ರಿಗೆ ಉಪಾಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದವ್ರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ!
ಬಿಎಂಟಿಸಿ ಅಧ್ಯಕ್ಷ, ಉಪಾಧ್ಯಕ್ಷರೇ ಅದಲು ಬದಲು!
ಬಿಎಂಟಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದರಿಗೆ ಉಪಾಧ್ಯಕ್ಷ ಸ್ಥಾನ, ಉಪಾಧ್ಯಕ್ಷರಾಗಿ ನೇಮಕ ಆದವರಿಗೆ ಅಧ್ಯಕ್ಷ ಸ್ಥಾನದ ಮರು ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಬಿಎಂಟಿಸಿ ಅಧ್ಯಕ್ಷರಾಗಿ ವಿಎಸ್ ಆರಾಧ್ಯ ನೇಮಕವಾಗಿದ್ದು, ನಿಕೇತ್ ರಾಜ್ ಮೌರ್ಯಗೆ ಬಿಎಂಟಿಸಿ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.
ಬಿಎಂಟಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದ ನಿಕೇತ್ ರಾಜ್ ಮೌರ್ಯ
ನಿಕೇತ್ ರಾಜ್ ಮೌರ್ಯ ಈ ಮೊದಲು ಬಿಎಂಟಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಆದರೆ ಇದೀಗ ಅವರನ್ನು ಬಿಎಂಟಿಸಿ ಉಪಾಧ್ಯಕ್ಷರನ್ನಾಗಿ ಮರು ನೇಮಿಸಿ ಸರ್ಕಾರ ಆದೇಶಿಸಿದೆ. ಇನ್ನು ಬಿಎಂಟಿಸಿ ಉಪಾಧ್ಯಕ್ಷರಾಗಿದ್ದ ವಿಎಸ್ ಆರಾಧ್ಯ ಎಂಬುವರನ್ನು ಬಿಎಂಟಿಸಿ ಅಧ್ಯಕ್ಷರನ್ನಾಗಿ ಮರು ನೇಮಿಸಿ ಸರ್ಕಾರ ಆದೇಶಿಸಿದೆ.
ಬಾಕಿ ಇರುವ 5 ನಿಗಮಕ್ಕೆ ಅಧ್ಯಕ್ಷರ ನೇಮಕ
ಇನ್ನು ಬಾಕಿ ಉಳಿದ 5 ನಿಗಮ ಮಂಡಳಿಗಳಿಗೂ ಅಧ್ಯಕ್ಷರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
- ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ – ಸೈಯದ್ ಮೆಹಮೂದ್ ಚಿಸ್ಟಿ- ಅಧ್ಯಕ್ಷ
- ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ – ಶರಣಪ್ಪ ಸಲಾದ್ ಪುರ್ – ಅಧ್ಯಕ್ಷ
- ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ – ಆಂಜನಪ್ಪ- ಅಧ್ಯಕ್ಷ
- ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ – ನೀಲಕಂಠರಾವ್ ಎಸ್ ಮೂಲಗೆ, ಅಧ್ಯಕ್ಷ
- ಜವಾಹರ ಬಾಲಭವನ ಸೊಸೈಟಿ – ಅನಿಲ್ ಕುಮಾರ್ ಜಮಾದಾರ್- ಉಪಾಧ್ಯಕ್ಷ
ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ರಘು ಪದಗ್ರಹಣ
ಇಂದು ರಾಜ್ಯ ಸಪಾಯಿ ಕರ್ಮಚಾರಿಗಳ ಆಯೋಗದ ನೂತನ ಅಧ್ಯಕ್ಷರಾಗಿ ಪಿ ರಘು ಪದಗ್ರಹಣ ಮಾಡಿದರು. ಬೆಂಗಳೂರು ನಗರದ ಕಾರ್ಪೋರೇಷನ್ ಸರ್ಕಲ್ ಬಳಿ ಇರುವ ಸಪಾಯಿ ಕರ್ಮಚಾರಿಗಳ ಆಯೋಗದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಂವಿಧಾನದ ಪೀಠಿಕೆ ಹಿಡಿದು ನೂತನ ಅಧ್ಯಕ್ಷ ರಘು ಅಧಿಕಾರವಹಿಸಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಚಿರಋಣಿ ಎಂದ ನೂತನ ಅಧ್ಯಕ್ಷ
ಸರಳವಾಗಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷ ಪಿ ರಘು ಅವರಿಗೆ ಅವರ ಹಿತೈಷಿಗಳು ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು..ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅಧ್ಯಕ್ಷ ರಘು ಈ ಸ್ಥಾನ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಚಿರರುಣಿಯಾಗಿರುತ್ತೇನೆ. ಕರ್ಮಚಾರಿಗಳು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಕರ್ಮಚಾರಿಗಳ ಸಮಸ್ಯೆಯನ್ನ ಬಗೆಹರಿಸುವ ಪ್ರಯತ್ನ ಮಾಡ್ತೇನೆ. ಆಯೋಗದಿಂದ ಕರ್ಮಚಾರಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಬಗ್ಗೆಯೂ ಪ್ರಯತ್ನಿಸೋದಾಗಿ ಹೇಳಿದರು.











































