ಬಂಟ್ವಾಳ: ಬಿ.ಸಿ.ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿಗುರುವಾರ (ಜು.16) ಸಂಜೆ ಯುವತಿಯೊಬ್ಬಳನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಅರೋಪಿಯು ವಿಷಪ್ರಾಷನ ಮಾಡಿದ್ದು, ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಂಟ್ವಾಳ ತಾಲೂಕಿನ ಉಳಿ ಗ್ರಾಮ ನಿವಾಸಿ ಲಾವಣ್ಯಾ (21) ಎಂಬಾಕೆಯನ್ನು ಬೆಳ್ತಂಗಡಿ ಒಡಿಲ್ನಾಳ ನಿವಾಸಿ, ಆಕೆಯ ದೂರದ ಸಂಬಂಧಿ ಚೇತನ್ ಎಂಬಾತ ತಲವಾರಿನಿಂದ ಕಡಿದು ಹತ್ಯೆ ಮಾಡಿದ್ದ.ಶುಕ್ರವಾರ ಬೆಳಗ್ಗೆ ಆರೋಪಿ ಚೇತನ್ ನನ್ನು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಆದರೆ ಈ ವೇಳೆ ಆರೋಪಿ ಇಲಿ ಪಾಷಾಣ ಸೇವಿಸಿದ್ದ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ ಪಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಒನ್ ಸೈಡ್ ಲವ್
ಯುವತಿಯ ದೂರದ ಸಂಬಂಧಿಯಾಗಿದ್ದ ಆರೋಪಿ ಚೇತನ್ (22) ಯುವತಿಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಂಟ್ವಾಳ ತಾಲೂಕಿನ ಕಕ್ಕೆಪದವು ಮೈರ ನಿವಾಸಿ ಕೃಷಿಕ ಬಾಳಪ್ಪ ಗೌಡ ಅವರಿಗೆ ಮೂವರು ಪುತ್ರಿಯರು. ಅವರಲ್ಲಿ ಲಾವಣ್ಯಾ ಕೊನೆಯವರು. 8 ತಿಂಗಳಿನಿಂದ ಆಕೆ ಕಲ್ಲಡ್ಕ ಸಮೀಪದಲ್ಲಿ ನರ್ಸಿಂಗ್ ಕೆಲಸಕ್ಕೆ ತೆರಳುತ್ತಿದ್ದರು.ಗುರುವಾರ ಸಂಜೆ ಕೆಲಸದಿಂದ ಆಗಮಿಸಿದ ಯುವತಿ ಕಕ್ಯಪದವು ಕಡೆಗೆ ತೆರಳಲು ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ನಲ್ಲಿ ಕುಳಿತಿದ್ದರು. ಈ ವೇಳೆ ಆರೋಪಿ ಅಲ್ಲಿಗೆ ಬಂದಿದ್ದಾನೆ. ಆತಂಕಗೊಂಡ ಯುವತಿ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು. ಯುವಕ ಬೆನ್ನಟ್ಟಿ ಭೀಕರವಾಗಿ ಕತ್ತಿಯಿಂದ ಕಡಿದಿದ್ದಾನೆ. ತಡೆಯಲು ಬಂದವರನ್ನು ಬೆದರಿಸಿದ್ದಾನೆ. ಕೃತ್ಯ ನಡೆಸಿದ ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದ.











































