ಬಿಡದಿ ಟೌನ್‌ಶಿಪ್ | ಪೊರಕೆ, ಒನಕೆಗೆ ಪೂಜೆ; ಕಡೆವರೆಗೆ ಹೋರಾಟದ ಸಂಕಲ್ಪ

Picture of Savistara

Savistara

Bureau Report

ಬಿಡದಿ (ರಾಮನಗರ): ಹೋಬಳಿಯಲ್ಲಿ ತಲೆ ಎತ್ತಲಿರುವ ಗ್ರೇಟರ್ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ವಿರೋಧಿಸಿ, ಬೈರಮಂಗಲದಲ್ಲಿ ಕಳೆದ 494 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ರೈತ ಮಹಿಳೆಯರು ಗುರುವಾರ ಪೊರಕೆ ಮತ್ತು ಒನಕೆ ಪೂಜೆ ಮಾಡಿ, ಯೋಜನೆ ಕೈ ಬಿಡುವವರೆಗೆ ಹೋರಾಟ ನಡೆಸುವ ಸಂಕಲ್ಪ ಮಾಡಿದರು.

ಹೋರಾಟದ ಸ್ಥಳದಲ್ಲಿ ಪೊರಕೆ ಮತ್ತು ಒನಕೆಗಳೊಂದಿಗೆ ಜಮಾಯಿಸಿದ ಮಹಿಳೆಯರು ಟೌನ್‌ಶಿಪ್ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ, ತಮ್ಮೊಂದಿಗೆ ತಂದಿದ್ದ ಪೊರಕೆ ಮತ್ತು ಒನಕೆಗಳಿಗೆ ಹರಿಸಿನ-ಕುಂಕುಮ ಇಟ್ಟು, ಹೂ ಹಾಕಿ ಪೂಜೆಯನ್ನು ಸಲ್ಲಿಸಿದರು. ನಮ್ಮ ಹೋರಾಟಕ್ಕೆ ಪೊರಕೆ-ಒನಕೆಯೇ ಶಕ್ತಿ ಎಂದು ಘೋಷಣೆಗಳನ್ನು ಕೂಗಿದರು.’ಬಿಡದಿ ರೈತರ ಗತ್ತು ದೇಶಕ್ಕೆ ಗೊತ್ತು’ ಎಂಬ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಈ ವೇಳೆ, ‘ಬೇಡವೇ ಬೇಡ, ಟೌನ್‌ಶಿಪ್ ಬೇಡ’, “ಜೀವ ಬಿಟ್ಟೆವು, ಭೂಮಿ ಕೊಡೆವು’, ‘ರೈತರ ಭೂಮಿ ಕಸಿಯುತ್ತಿರುವ ಸರ್ಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳು ಮೊಳಗಿದವು.

ಬಿಎಸ್‌ಪಿ ಬೆಂಬಲ:

ಹೋರಾಟದ ಸ್ಥಳಕ್ಕೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಧ್ಯಕ್ಷ ಕೃಷ್ಣಮೂರ್ತಿ ಅವರು ಭೇಟಿ ನೀಡಿ ತಮ್ಮ ಬೆಂಬಲ ಸೂಚಿಸಿದರು. ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಬಂದ ಅವರು ಹೋರಾಟ ನಿರತ ರೈತರ ಜೊತೆ ಕೆಲ ಹೊತ್ತು ಕುಳಿತರು.ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೃಷ್ಣಮೂರ್ತಿ, ‘ಸರ್ಕಾರ ರೈತ ಇಚ್ಛೆಗೆ ವಿರುದ್ಧವಾಗಿ ಫಲತ್ತಾದ ಭೂಮಿಯಲ್ಲಿ ಟೌನ್‌ಶಿಪ್‌ ನಿರ್ಮಾಣ ಮಾಡಲು ಮುಂದಾಗಿರುವುದು ಖಂಡನೀಯ. ಯೋಜನೆ ವಿರೋಧಿಸಿ ರೈತರು ಒಂದೂವರೆ ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಅವರಿಗೆ ಸ್ಪಂದಿಸಿಲ್ಲ. ಮೊಂಡುತನ ಬಿಟ್ಟು ಯೋಜನೆಯನ್ನು ಕೈ ಬಿಡಬೇಕು’ ಎಂದು ಆಗ್ರಹಿಸಿದರು.

[t4b-ticker]
error: Content is protected !!