ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.
ದೂರವಾಣಿ ಕರೆ ಮೂಲಕ ಪ್ರಧಾನಿ ಸಾಂತ್ವನ
ಚೆನ್ನಮ್ಮ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹೆಚ್.ಡಿ. ದೇವೇಗೌಡರಿಗೆ ಕರೆ ಮಾಡಿದರು. ದಶಕಗಳ ಕಾಲ ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಹೆಚ್ಡಿಡಿಗೆ ನೆರಳಾಗಿ ನಿಂತಿದ್ದ ಚೆನ್ನಮ್ಮ ಅಗಲಿಕೆ ತುಂಬಲಾರದ ನಷ್ಟ ಎಂದ ಮೋದಿ, ಈ ಕಷ್ಟದ ಸಮಯದಲ್ಲಿ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಇಡೀ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು.
‘ಎಕ್ಸ್’ ಪೋಸ್ಟ್ನಲ್ಲಿ ಮೋದಿ ಭಾವುಕ ನುಡಿ
ದೂರವಾಣಿ ಕರೆಯ ಬೆನ್ನಲ್ಲೇ ಪ್ರಧಾನಿ ಮೋದಿ ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಸಂತಾಪದ ನುಡಿಗಳನ್ನು ಹಂಚಿಕೊಂಡಿದ್ದಾರೆ.ಮಾಜಿ ಪ್ರಧಾನಮಂತ್ರಿ ಶ್ರೀ ದೇವೇಗೌಡರ ಪತ್ನಿ ಶ್ರೀಮತಿ ಚೆನ್ನಮ್ಮನವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ತಮ್ಮ ವಿನಯ ಮತ್ತು ಸಮಾಜ ಸೇವೆಯ ಮೇಲಿನ ಬದ್ಧತೆಗಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಈ ದುಃಖದ ಸಮಯದಲ್ಲಿ ಶ್ರೀ ದೇವೇಗೌಡರು ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳು. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
ಕಂಬನಿ ಮಿಡಿದ ರಾಜಕೀಯ ಗಣ್ಯರು
ಚೆನ್ನಮ್ಮ ಅವರ ನಿಧನಕ್ಕೆ ಕೇವಲ ಪ್ರಧಾನಿ ಮೋದಿ ಮಾತ್ರವಲ್ಲದೆ, ದೇಶ ಹಾಗೂ ರಾಜ್ಯದ ಪ್ರಮುಖ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಸರಳತೆ ಮತ್ತು ವಿನಯತೆಗೆ ಹೆಸರಾಗಿದ್ದ ಚೆನ್ನಮ್ಮ ದೇವೇಗೌಡರ ಸುದೀರ್ಘ ರಾಜಕೀಯ ಪಯಣದಲ್ಲಿ ಸದಾ ಮುನ್ನೆಲೆಯಲ್ಲಿ ನಿಂತು ಕುಟುಂಬವನ್ನು ಮುನ್ನಡೆಸಿದ್ದರು ಎಂದು ಗಣ್ಯರು ಸ್ಮರಿಸಿದ್ದಾರೆ.










































