ನವದೆಹಲಿ (ಪಿಟಿಐ): ‘ಪ್ರತಿಯೊಬ್ಬ ನಾಗರಿಕನ ಜೀವವೂಅಮೂಲ್ಯವಾದುದು. ಆದ್ದರಿಂದ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೊನಮ್ ವಾಂಗ್ರೂಕ್ ಅವರ ವೈದ್ಯಕೀಯ ತಪಾಸಣೆಯನ್ನು ನಿತ್ಯವೂ ನಡೆಸಬೇಕು’ ಎಂದು ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸೊನಮ್ ಅವರು 19 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.’ಸೊನಮ್ ಅವರಿಗೆ ಒತ್ತಾಯಪೂರ್ವಕವಾಗಿ ಆಹಾರ ನೀಡಬೇಕು. ಈ ವಿಷಯದಲ್ಲಿ ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಮಧ್ಯಪ್ರವೇಶಿಸಬೇಕು’ ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠ ನಡೆಸಿತು.’ಎಲ್ಲ ಪ್ರಜೆಯ ಜೀವವೂ ಅಮೂಲ್ಯವೇ ಆಗಿದೆ ಎಂದು ನಾವು ನಂಬಿದ್ದೇವೆ. ಪ್ರತಿಯೊಬ್ಬರ ಜೀವವನ್ನು ಉಳಿಸುವ ಎಲ್ಲ ವೈದ್ಯಕೀಯ ಯತ್ನವನ್ನೂ ಮಾಡುತ್ತೇವೆ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಪ್ರತಿಕ್ರಿಯಿಸಿದರು.
“ನಿಮ್ಮ ಬಳಿ ಸೊನಮ್ ಅವರ ಆರೋಗ್ಯ ತಪಾಸಣೆ ನಡೆಸಿದ ವರದಿ ಇದೆಯೇ?’ ಎಂದು ಪೀಠ ಕೇಳಿತು. ಇದಕ್ಕೆ ಉತ್ತರಿಸಿದ ಮೆಹ್ರಾ, ‘ಅವರು ಸರ್ಕಾರಿ ವೈದ್ಯರಿಗೆ ಯಾವಾಗೆಲ್ಲಾ ತಪಾಸಣೆ ನಡೆಸಲು ಅವಕಾಶ ನೀಡಿದ್ದಾರೆಯೋ ಆ ಎಲ್ಲ ಬಾರಿಯ ವರದಿಗಳಿವೆ. ಅವರು ತಪಾಸಣೆಗಾಗಿ ಖಾಸಗಿ ವೈದ್ಯರಿಗೂ ಅವಕಾಶ ನೀಡುತ್ತಾರೆ’ ಎಂದರು.’ಸರ್ಕಾರಿ ವೈದ್ಯರು ಸೊನಮ್ ಅವರ ತಪಾಸಣೆ ನಡೆಸಿ ನೀಡುವ ವರದಿ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಿ’ ಎಂದು ಪೀಠ ಹೇಳಿತು.
ಆಹಾರ ಸೇವಿಸಿ ಎನ್ನುವ ಬದಲು ಮೆರವಣಿಗೆಯಲ್ಲಿ ಭಾಗಿಯಾಗಿನಾನು ಒಂದೊಮ್ಮೆ ಆಹಾರ ಸೇವಿಸಿದರೆ ಅದು ಯಾವ ಸಂದೇಶ ನೀಡುತ್ತದೆ? ಪ್ರತಿಭಟನಕಾರರು ಕೂತೆದ್ದು ಹೋಗುತ್ತಾರೆ ಎನ್ನುವಂತಹ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದಂತೆ ಆಗುತ್ತದೆ. ಆಹಾರ ಸೇವಿಸಿ ಎಂದು ನನಗೆ ಒತ್ತಾಯಿಸುವ ಬದಲು ಸಿಜೆಪಿ ಇದೇ 20ರಂದು ಸಂಸತ್ತಿನವರೆಗೆ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯನ್ನು ಸೇರಿಕೊಳ್ಳಿ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ. 2-3 ದಿನಗಳಲ್ಲಿ ಸಾಯುವಂಥ ಪರಿಸ್ಥಿತಿ ಇಲ್ಲ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಎಲ್ಲ ವೈದ್ಯಕೀಯ ವರದಿಗಳಲ್ಲಿಯೂ ಬಂದಿದೆ. ಹೌದು ತುಸು ದೌರ್ಬಲ್ಯವಿದೆ. ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸೊನಮ್ ವಾಂಗ್ಟಕ್











































