ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರುಸ್ಫೋಟಕ್ಕೆ ಸಂಬಂಧಿಸಿ ಪ್ರಮುಖ ಸಂಚುಕೋರನನ್ನು ಎನ್ಐಎ ಅಧಿಕಾರಿಗಳು ಶ್ರೀನಗರದಲ್ಲಿ ಭಾನುವಾರ ಬಂಧಿಸಿದ್ದಾರೆ. ಇದರೊಂದಿಗೆ, ಈ ಘಟನೆ ಕುರಿತ ತನಿಖೆಯು ಮಹತ್ವದ ಘಟ್ಟ ತಲುಪಿದಂತಾಗಿದೆ.
ಅಮೀರ್ ರಶೀದ್ ಅಲಿ ಬಂಧಿತ. ಸ್ಫೋಟಗೊಂಡ ಕಾರು ಅಮೀರ್ ಹೆಸರಿನಲ್ಲಿ ನೋಂದಣಿಯಾಗಿತ್ತು. ಈತ ಜಮ್ಮು-ಕಾಶ್ಮೀರದ ಪಾಂಪೋರ್ನ ಸಂಬೂರಾ ನಿವಾಸಿ’ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.’ಈ ಭಯೋತ್ಪಾದಕ ಕೃತ್ಯ ಎಸಗಲು ಅಮೀರ್, ಆತ್ಮಾಹುತಿ ಬಾಂಬರ್ ಡಾ.ಉಮರ್ ನಬಿ ಜೊತೆ ಸೇರಿ ಸಂಚು ರೂಪಿಸಿದ್ದ. ‘ಕಾರಿನಲ್ಲಿ ಒಯ್ದ ಕಚ್ಚಾ ಬಾಂಬ್’ ಬಳಸಿ ಸ್ಫೋಟಿಸುವ ಉದ್ದೇಶದಿಂದ ಕಾರು ಖರೀದಿಗೆ ನೆರವಾಗಲು ಈತ ಕಳೆದ ವರ್ಷ ದೆಹಲಿಗೆ ಬಂದಿದ್ದ’ ಎಂದಿದ್ದಾರೆ.’ಡಾ.ಉಮರ್ ನಬಿ, ಅಮೀರ್ ಅಲಿ ಕಳೆದ ಕೆಲ ತಿಂಗಳಿನಿಂದ ಸಂಪರ್ಕದಲ್ಲಿದ್ದರು. ನ.10ರಂದು ನಡೆಸಿದ ದಾಳಿಗಾಗಿ ಸ್ಪೋಟಕ ಸಿದ್ಧಪಡಿಸುವಲ್ಲಿ ನಿರತರಾಗಿದ್ದರು’ ಎನ್ಐಎ ಶಂಕಿಸಿದೆ.
ಇದೇ ಮೊದಲ ಬಾರಿಗೆ ಎನ್ಐಎ, ಡಾ.ಉಮರ್ ನಬಿಯನ್ನು ‘ಆತ್ಮಾಹುತಿ ಬಾಂಬರ್’ ಎಂದು ಕರೆದಿದೆ. ಸ್ಫೋಟಕಕ್ಕೆ ‘ಕಾರಿನಲ್ಲಿ ಒಯ್ದ ಕಚ್ಚಾ ಬಾಂಬ್’ (ಐಇಡಿ) ಎಂಬ ಪದವನ್ನು ಸಹ ಮೊದಲ ಬಾರಿಗೆ ಬಳಸಿದೆ.











































