ನವದೆಹಲಿ: ಕಾಡು ಪ್ರಾಣಿಗಳದಾಳಿಯಿಂದ ಉಂಟಾಗುವ ಬೆಳೆ ನಷ್ಟವನ್ನು 2026ರ ಖಾರಿಫ್ ಬಿತ್ತನೆ ಋತುವಿನಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಭರಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ. ಆನೆ, ಕಾಡುಹಂದಿ, ನೀಲಗಾಯ್, ಜಿಂಕೆ, ಕೋತಿ ಮುಂತಾದ ಕಾಡು ಪ್ರಾಣಿಗಳ ದಾಳಿಯಿಂದಾಗಿ ದೇಶಾದ್ಯಂತ ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ.
ಕಾಡುಗಳು, ವನ್ಯಜೀವಿ ಕಾರಿಡಾರ್ಗಳು ಮತ್ತು ಗುಡ್ಡಗಾಡು ಪ್ರದೇಶಗಳ ಸಮೀಪದ ಗ್ರಾಮಗಳಲ್ಲಿ ಇದು ಸಾಮಾನ್ಯವಾಗಿದೆ. ಪರಿಷ್ಕೃತ ನಿಯಮಗಳಡಿ ಇದನ್ನು ಇನ್ನುಮುಂದೆ ಸ್ಥಳೀಯ ಅಪಾಯದ ವರ್ಗದಡಿ ಐದನೇ ಆ್ಯಡ್ಆನ್ ಕವರ್ ಎಂದು ಗುರುತಿಸಲಾಗುವುದು. ಬೆಳೆ ಹಾನಿ ಉಂಟು ಮಾಡುತ್ತಿರುವ ಕಾಡು ಪ್ರಾಣಿಗಳ ಈ ಪಟ್ಟಿಯನ್ನು ರಾಜ್ಯ ಸರ್ಕಾರಗಳು ಸೂಚಿಸಬೇಕು.
ಜಿಯೋಟ್ಯಾಗ್ಸ್ ಫೋಟೋ ಅಪ್ ಲೋಡ್ ಮಾಡುವ ಮೂಲಕ ರೈತರು ಬೆಳೆ ವಿಮಾ ಅಪ್ಲಿಕೇಶನ್ ಬಳಸಿ 72 ಗಂಟೆಗಳ ಒಳಗೆ ನಷ್ಟದ ವರದಿ ಸಲ್ಲಿಸಬೇಕಾಗುತ್ತದೆ. ಒಡಿಶಾ, ಛತ್ತೀಸ್ ಗಢ, ಜಾರ್ಖಂಡ್, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಉತ್ತರಾಖಂಡ ಮುಂತಾದ ರಾಜ್ಯಗಳರೈತರಿಗೆ ಇದರಿಂದ ಪ್ರಯೋಜನ ಆಗಲಿದೆ.
ಭತ್ತದ ಬೆಳೆ ಹಾನಿಗೂ ಪರಿಹಾರ: ಇದಲ್ಲದೆ, ಅತಿವೃಷ್ಟಿಮತ್ತು ಪ್ರವಾಹದಿಂದ ಭತ್ತದ ಬೆಳೆ ಮುಳುಗಿದರೆ ಅದಕ್ಕೂ ಇದೇ ಯೋಜನೆಯಡಿ ನಷ್ಟ ಭರ್ತಿ ಮಾಡಿಕೊಡಲಾಗುವುದು. ಈ ಸಮಸ್ಯೆಗೆ ಪರಿಹಾರ ನೀಡುವುದನ್ನು ವಿವಿಧ ಕಾರಣಗಳಿಂದಾಗಿ 2018ರಲ್ಲಿ ಸ್ಥಳೀಯ ವಿಪತ್ತು ವಿಭಾಗದಿಂದ ತೆಗೆದುಹಾಕಲಾಗಿತ್ತು. ತಜ್ಞರ ಸಮಿತಿಯ ಶಿಫಾರಸು ಮೇರೆಗೆ ಮತ್ತೆ ಸೇರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.











































