ಮಂಗಳೂರು: ರಾಜ್ಯ ಸರ್ಕಾರ ಈಗಾಗಲೇ ರಾಜಧನ ಇಳಿಕೆ ಮಾಡಿದ ಬಳಿಕ ಕೆಂಪುಕಲ್ಲಿನ ದರ ಇಳಿಕೆ ಹಾದಿಯಲ್ಲಿದ್ದು, ಕೆಂಪು ಕಲ್ಲು ಗಣಿಗಾರಿಕೆಗೆ ಇನ್ನಷ್ಟು ಪರವಾನಗಿ ಲಭ್ಯವಾದಂತೆ ಎರಡು ತಿಂಗಳಲ್ಲಿ ದರವೂ ಇಳಿಕೆಯಾಗಲಿದೆ ಎಂದು ದ.ಕ. ಜಿಲ್ಲಾ ಕೆಂಪುಕಲ್ಲು ಪಾಯಗಳ ಮಾಲೀಕರ ಒಕ್ಕೂಟದ ಅಧ್ಯಕ್ಷ ಸತೀಶ್ ಆಚಾರ್ಯ ತಿಳಿಸಿದ್ದಾರೆ.
ಈ ಹಿಂದೆ 242ರಷ್ಟು ಕೆಂಪುಕಲ್ಲು ಪಾಯಗಳಿಗೆ ಪರವಾನಗಿ ಇದ್ದು, ಇಷ್ಟೊಂದು ನಿಯಮಗಳೂ ಇರಲಿಲ್ಲ. ಕಳೆದ 6 ತಿಂಗಳಿನಿಂದೀಚೆಗೆ ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಪರವಾನಗಿ ಸೀಮಿತಗೊಂಡಿದೆ. ಈಗಾಗಲೇ 55 ಕಡೆ ಕಲ್ಲು ಗಣಿಗಾರಿಕೆಗೆ ಪರವಾನಗಿ ದೊರಕಿದ್ದು, ಸುಮಾರು 29ರಷ್ಟು ಪರವಾನಗಿ ಪ್ರಕ್ರಿಯೆ ಹಂತದಲ್ಲಿದೆ. ಈ ಪರವಾನಗಿ ದೊರೆತಾಗ ಈಗಾಗಲೇ ಇಳಿಕೆಯಾಗುತ್ತ ಸಾಗಿರುವ ಕೆಂಪುಕಲ್ಲಿನ ದರ ಇನ್ನಷ್ಟು ಇಳಿಕೆಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕೆಂಪುಕಲ್ಲಿಗೆ ಸಾಕಷ್ಟು ಬೇಡಿಕೆ ಹೊರತಾಗಿಯೂ ಪರವಾನಗಿ ಸೀಮಿತವಾಗಿರುವುದರಿಂದ ಸಾಗಾಟ ದರ ಹೆಚ್ಚಳವಾಗಿದೆ. ಕ್ವಾರಿಗಳಲ್ಲಿ ಈಗಾಗಲೇ ಎರಡು ವಿಧದ ಕಲ್ಲು ತಲಾ 35 ರೂ.ದರದೊಳಗೆ ನೀಡಲಾಗುತ್ತಿದೆ. ನಗರಕ್ಕೆ ಹತ್ತಿರ 12 ಪರವಾನಗಿಗಳು ಮಾತ್ರವೇ ಇದ್ದು, ಉಳಿದೆಲ್ಲವೂ ಸುಳ್ಯ, ಪುತ್ತೂರು ಕಡೆ ಇರುವುದರಿಂದ ಸಾಗಾಟಕ್ಕೆ ಹೆಚ್ಚು ವೆಚ್ಚವಾಗುತ್ತಿದೆ ಎಂದರು.ಪರವಾನಗಿ ಮಾಡಬೇಕಾದರೆ ನಕ್ಷೆ ಮಾಡಿ ಭೂದಾಖಲೆ ಅಧಿಕಾರಿಗಳಿಗೆ ಸಲ್ಲಿಸಿ ಗಣಿ ಹಾಗೂ ಕಂದಾಯ ಇಲಾಖೆ
ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆದು ಬಳಿಕ ಅನುಮತಿ ನೀಡಲಾಗುತ್ತದೆ. ನಿಗದಿಪಡಿಸಿದ ಸ್ಥಳದಲ್ಲಿ ಕಲ್ಲು ದೊರೆಯದಿದ್ದರೆ ಇನ್ನೊಂದು ಜಾಗದಲ್ಲಿ ಅವಕಾಶ ಕೋರಲು ಮತ್ತೆ ಮರು ಅರ್ಜಿ ಸಲ್ಲಿಸಬೇಕಾಗುತ್ತದೆ. ಬಳಿಕ ಕಲ್ಲು ತೆಗೆದ ಜಾಗದಲ್ಲಿ ಮಣ್ಣು ತುಂಬಿಸುವ ಕಾರ್ಯ ನಡೆಯಬೇಕು. ಕೃಷಿಗೆ ಪೂರಕ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಈ ರೀತಿಯಾಗಿ ನಿಯಮಗಳು ಕಠಿಣಗೊಂಡಿರುವುದರಿಂದ ಪರವಾನಗಿ ಸಂಖ್ಯೆಯೂ ಕಡಿಮೆಯಾಗಿದೆ. 256 ರೂ.ಗೆ ಏರಿಕೆಯಾಗಿದ್ದ ರಾಜಧನ ಇದೀಗ ಹಿಂದಿನಂತೆ 97 ರೂ.ಗೆ ಇಳಿಕೆಯಾಗಿದೆ. ಒಂದು ಎಕರೆ ಭೂಮಿಯಲ್ಲಿ 16 ಸಾವಿರ ಟನ್ ಮುರಕಲ್ಲು (5,28,000 ಕೆಂಪುಕಲ್ಲು) ತೆಗೆಯಲು ಅವಕಾಶವಿದೆ. ಕಲ್ಲೊಂದರ ಉತ್ಪಾದನೆಗೆ ಎಲ್ಲ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿದಾಗ 28 ರೂ. ಆಗುತ್ತದೆ. ಸದ್ಯ ಕಲ್ಲು ಕ್ವಾರಿಗಳಲ್ಲಿ 32 ರೂ.ನಿಂದ 35 ರೂ. ದರದಲ್ಲಿ ಕಲ್ಲು ಪೂರೈಸಲಾಗುತ್ತಿದೆ ಎಂದು ಉಪಾಧ್ಯಕ್ಷ ರವಿಶಂಕರ್ ಮಾಹಿತಿ ನೀಡಿದರು.ಕೋಶಾಧಿಕಾರಿ ರಾಮ ಮುಗೋಡಿ, ಬಂಟ್ವಾಳ ವಲಯದ ಅಧ್ಯಕ್ಷ ಮೋಹನ್ ಶೆಟ್ಟಿ, ರವಿ ರೈ ಪಜೀರು ಉಪಸ್ಥಿತರಿದ್ದರು.











































