ಬೆಳಗಾವಿ: ರಾಜ್ಯ ಸರಕಾರವು ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದ್ದಾರೆ.ಮಾಧ್ಯಮಗಳ ಜೊತೆ ಇಂದು ಇಲ್ಲಿ ಮಾತನಾಡಿದ ಅವರು, ಪಟಾಪಟ್ ಎಂದು ಗೃಹಲಕ್ಷ್ಮಿಯ 5 ಸಾವಿರ ಕೋಟಿ ಲೂಟಿ ಹೊಡೆದುದು ನಿನ್ನೆ ಗೊತ್ತಾಗಿದೆ.
ಸುಮಾರು 1.26 ಕೋಟಿ ಮನೆಯ ಗೃಹಿಣಿಯರಿಗೆ ಅದು ತಲುಪಬೇಕಿತ್ತು ಎಂದು ತಿಳಿಸಿದರು. ಇದರಲ್ಲಿ ಮೋಸ ಮಾಡಿದ್ದಾರೆ ಎಂದು ದೂರಿದರು.ಶಕ್ತಿ ಯೋಜನೆಯಲ್ಲೂ ಹಣ ಬಾಕಿ ಇದೆ. ಕಾರ್ಮಿಕರು ಬೀದಿಗಿಳಿದು ಹೋರಾಡುವಂತಾಗಿದೆ. ಕಾಂಗ್ರೆಸ್ ಸರಕಾರ ದಿವಾಳಿ ಆಗಿದೆ. ಸಂಬಳ ಕೊಡಲೂ ಹಣ ಇಲ್ಲ; ಆ ಪರಿಸ್ಥಿತಿ ಬಂದಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ಸಿನ ಮಾನ ಮರ್ಯಾದೆ ಬಟಾಬಯಲಾಗಿದೆ ಎಂದು ಟೀಕಿಸಿದರು.ಹಣ ಇಲ್ಲ; ಇನ್ನೊಂದೆಡೆ ತೆರಿಗೆ ಮೇಲೆ ತೆರಿಗೆ. ಈಗ ಸ್ಟಾಂಪ್ ಡ್ಯೂಟಿ ಹೆಚ್ಚಿಸುವುದಾಗಿ ಹೇಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ಬಜೆಟ್ನಲ್ಲಿ ಎಣ್ಣೆ ತೆಗೆದುಕೊಳ್ಳುವವರ ಮೇಲೂ ಟ್ಯಾಕ್ಸ್ ಬೀಳಲಿದೆ. ಮನೆ ತೆರಿಗೆ ಹೆಚ್ಚಿಸಲಿದ್ದಾರೆ. ನಾಗರಿಕರಿಗೆ ಕೊಡುವ ಸೌಲಭ್ಯಕ್ಕೆ ಕತ್ತರಿ ಹಾಕುವ ತುಘಲಕ್ ಸರಕಾರ ಇದೆಂದು ದೂರಿದರು.













































