
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು ರವರನ್ನು ನೇಮಕ ಮಾಡಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಒಂದೂಕಾಲು ವರ್ಷಗಳ ಹಿಂದೆ ರಾಧಾಕೃಷ್ಣ ಬೊಳ್ಳೂರು ನೇಮಕಗೊಂಡಾಗ ವ್ಯಕ್ತವಾದ ಆಕ್ಷೇಪದ ಹಿನ್ನೆಲೆಯಲ್ಲಿ ಹೊಸ ಬ್ಲಾಕ್ ಅಧ್ಯಕ್ಷರ ನೇಮಕಾತಿ ವಿಚಾರ ನೆನೆಗುದಿಗೆ ಬಿದ್ದಿತ್ತು. ಆ ಬಳಿಕ ಎರಡೆರಡು ಬಾರಿ ವೀಕ್ಷಕರು ಬಂದು ಕಾರ್ಯಕರ್ತರ ಅಭಿಪ್ರಾಯ ಕೇಳಿ ಬೊಳ್ಳೂರು ಪರವಾಗಿ ವರದಿ ನೀಡಿದ್ದರೂ ನೇಮಕಾತಿ ಆಗಿರಲಿಲ್ಲ.
ಕಳೆದ ತಿಂಗಳು ಡಿ.ಕೆ.ಶಿವಕುಮಾರ್ ರವರು ಮಂಗಳೂರಿಗೆ ಬಂದಿದ್ದಾಗ ಸುಳ್ಯದ ಹಿರಿಯ ಕಾಂಗ್ರೆಸ್ ನಾಯಕರುಗಳ ಜತೆ ಮಾತುಕತೆ ನಡೆಸಿದ್ದರಲ್ಲದೆ, ಅಂತಿಮ ಅಧಿಕಾರವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಲೋಕಸಭಾ ಅಭ್ಯರ್ಥಿಯಾಗಿದ್ದ ಪದ್ಮರಾಜ್ ಆರ್. ಪೂಜಾರಿಯವರಿಗೆ ನೀಡಿದ್ದರು. ಅದರಂತೆ ಅವರು ಎಲ್ಲರೊಂದಿಗೆ ಮಾತುಕತೆ ನಡೆಸಿ ಇದೀಗ ರಾಧಾಕೃಷ್ಣ ಬೊಳ್ಳೂರುರನ್ನು ಶಿಫಾರಸು ಮಾಡಿದ ಮೇರೆಗೆ ಕೆ.ಪಿ.ಸಿ.ಸಿ. ಅಧ್ಯಕ್ಷರು ರಾಧಾಕೃಷ್ಣ ಬೊಳ್ಳೂರುರನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಫೆ.16 ರಂದು ಬೊಳ್ಳೂರುರವರ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆಯೆಂದು ತಿಳಿದುಬಂದಿದೆ.













































