ದೆಹಲಿ: ಸಂಘರ್ಷದ ಕುರಿತು ಭಾರತದ ನಿಲುವಿನ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ತಲೆದೂರಿದ್ದು (Congress Internal Rift), ಸಂಸದ ಶಶಿ ತರೂರ್ ಈ ವಿಷಯದಲ್ಲಿ ಕೇಂದ್ರ ಸರ್ಕಾರದ ರಾಜತಾಂತ್ರಿಕ ನಡೆಯನ್ನು ಬೆಂಬಲಿಸಿದರೆ, ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಟೀಕಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ತರೂರ್, ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ಭಾರತ ಸಂತಾಪ ಸೂಚಿಸಬೇಕಿತ್ತು ಎಂದಿದ್ದಾರೆ. ಸಂಘರ್ಷದ ವಿಷಯದಲ್ಲಿ ಭಾರತ ಸರ್ಕಾರ ತೋರಿದ ಸಂಯಮವನ್ನು ಶ್ಲಾಘಿಸಿದ್ದು, ಇದು ಶರಣಾಗತಿಯಲ್ಲ, ಅದು ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ಇರುವ ಒಂದು ಶಕ್ತಿ ಎಂದು ತರೂರ್ ಪ್ರತಿಪಾದಿಸಿದ್ದಾರೆ.
ಸೋನಿಯಾ ಗಾಂಧಿ ಹೇಳಿದ್ದೇ ಬೇರೆ
ಇದೇ ವಿಷಯದ ಕುರಿತು ಮಾತನಾಡಿದ್ದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ತಮ್ಮ ಇತ್ತೀಚಿನ ಅಂಕಣದಲ್ಲಿ ಖಮೇನಿ ಹತ್ಯೆಯ ಬಗ್ಗೆ ಭಾರತದ ಮೌನವನ್ನು ಟೀಕಿಸಿದ್ದರು. ಆದರೆ ಇತ್ತ ತರೂರ್ ತಮ್ಮ ನಾಯಕರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಮಾತನಾಡಿದ್ದು, ಭಾರತವು ಇರಾನ್ನೊಂದಿಗೆ ಕಾರ್ಯತಂತ್ರದ ಸಂಬಂಧವನ್ನು ಹೊಂದಿದ್ದರೂ, ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಸಮತೋಲಿತ ನಿಲುವು ಅನಿವಾರ್ಯ ಎಂದಿದ್ದಾರೆ.ಈ ಯುದ್ಧವು ಭಾರತದ ಆರ್ಥಿಕತೆಯ ಮೇಲೆ ಬೀರುತ್ತಿರುವ ನಾಕ್-ಆನ್ ಪರಿಣಾಮದ ಬಗ್ಗೆ ತರೂರ್ ಆತಂಕಗೊಂಡಿದ್ದು, ಯುದ್ಧದ ಆರಂಭದಲ್ಲಿ ಬ್ಯಾರೆಲ್ಗೆ 64 ಡಾಲರ್ ಇದ್ದ ಕಚ್ಚಾ ತೈಲ ಬೆಲೆ ಈಗ 100 ರಿಂದ 120 ಡಾಲರ್ಗಳವರೆಗೆ ಏರಿಕೆಯಾಗುತ್ತಿರುವುದು ದೇಶದಲ್ಲಿ ಪೆಟ್ರೋಲ್ ಹಣದುಬ್ಬರಕ್ಕೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಭಾರತವು ತನ್ನ ಇಂಧನ ಮೂಲಗಳನ್ನು ವೈವಿಧ್ಯಗೊಳಿಸಬೇಕು ಮತ್ತು ಹೆಚ್ಚಿನ ವ್ಯಾಪಾರ ಒಪ್ಪಂದಗಳಿಗೆ ಒತ್ತು ನೀಡಬೇಕು ಎಂದು ಕಾಂಗ್ರೆಸ್ ಸಂಸದರು ಸಲಹೆ ನೀಡಿದ್ದು, ಭಾರತವು ಈಗಾಗಲೇ ರಾಜತಾಂತ್ರಿಕವಾಗಿ ಶಾಂತಿಗೆ ಕರೆ ನೀಡುತ್ತಿದೆ, ವಿದೇಶಾಂಗ ಕಾರ್ಯದರ್ಶಿಗಳು ಇರಾನ್ ರಾಯಭಾರ ಕಚೇರಿಗೆ ಭೇಟಿ ನೀಡಿ ಮೃತರ ಬಗ್ಗೆ ಸಂತಾಪ ಸೂಚಿಸುವ ಮೂಲಕ ತನ್ನ ಸೌಜನ್ಯವನ್ನು ಪ್ರದರ್ಶಿಸಿದೆ ಎಂದು ವರದಿಯಾಗಿದೆ













































